ಜಮ್ಮು: ‘ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆಯ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ’ ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ.
ರೈಫಲ್ ಮೆನ್ ವಿಕ್ರಮ್ ಸಿಂಗ್ ನೇಗಿ (26) ಮತ್ತು ಯೋಗಂಬರ್ ಸಿಂಗ್ (27) ಹುತಾತ್ಮರಾದವರು. ಪೂಂಚ್ ಜಿಲ್ಲೆಯ ಮೆಂಧಾರ್ ಉಪ ವಿಭಾಗದ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.
‘ಮೆಂಧಾರ್ ಉಪ ವಿಭಾಗದ ನರ್ಖಾಸ್ ಅರಣ್ಯದ ಸಾಮಾನ್ಯ ಪ್ರದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಗುರುವಾರ ಸಂಜೆ ಸೇನಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆಯಿತು. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಸೈನಿಕರು ಸಾವಿಗೀಡಾದರು’ ಎಂದು ರಕ್ಷಣಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಹೇಳಿದರು.
ಕರ್ತವ್ಯದ ವೇಳೆ ಇಬ್ಬರೂ ತೋರಿದ ಧೈರ್ಯ ಅಸಾಧಾರಣವಾದದ್ದು. ಅವರ ಸರ್ವೋಚ್ಛ ತ್ಯಾಗಕ್ಕಾಗಿ ದೇಶವು ಅವರಿಗೆ ಎಂದಿಗೂ ಋಣಿಯಾಗಿರುತ್ತದೆ ’ ಎಂದು ಅವರು ತಿಳಿಸಿದ್ದಾರೆ.
ಸೇನೆಯ ನಿಯೋಜಿತ ಕಿರಿಯ ಅಧಿಕಾರಿಯೊಬ್ಬರು ಕಾಣೆಯಾಗಿದ್ದು, ಅವರ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.