ಪೂರ್ನಿಯಾ, ಬಿಹಾರ: ಐವರು ಬಾಲಕರು ಇಲ್ಲಿನ ಬಾಲಗೃಹದ ವಾರ್ಡನ್ ಹಾಗೂ ಒಬ್ಬ ಬಾಲಾರೋಪಿಯನ್ನು ಗುಂಡಿಟ್ಟು ಹತ್ಯೆ ಮಾಡಿ ಬುಧವಾರ ಪರಾರಿಯಾಗಿದ್ದಾರೆ.
ಗುಂಡೇಟಿನ ಪರಿಣಾಮ ಮತ್ತಿಬ್ಬರು ಬಾಲಾರೋಪಿಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.ಪರಾರಿಯಾದವರ ಪೈಕಿ ಗುಂಡು ಹಾರಿಸಿದ ಬಾಲಕನು ಸ್ಥಳೀಯ ಜೆಡಿಯು ಮುಖಂಡನ ಮಗ.
ಕೆಮ್ಮಿನ ಸಿರಪ್ ಕಾರಣ:
ಕೆಮ್ಮಿನ ಸಿರಪ್ನಿಂದ ಅಮಲೇರುತ್ತದೆ ಎಂದು ಭಾವಿಸಿದ್ದ 15–17 ವರ್ಷದೊಳಗಿನ ಈ ಮಕ್ಕಳು 10 ಬಾಟಲ್ಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು. ಈ ಬಗ್ಗೆ ಬಾಲಾರೋಪಿಯೊಬ್ಬ ವಾರ್ಡನ್ಗೆ ಮಾಹಿತಿ ನೀಡಿದ್ದ. ಕೋಣೆ ತಪಾಸಣೆಗೆ ವೇಳೆ ವಾರ್ಡನ್ ವಿಜಯೇಂದ್ರ ಕುಮಾರ್ ಅವರಿಗೆ ಚೀಲದಲ್ಲಿ ಬಾಟಲ್ ಸಿಕ್ಕಿದ್ದವು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಾರ್ಡನ್, ಬಾಲಕರನ್ನು ಶೇಕ್ಪುರ ಬಾಲಗೃಹಕ್ಕೆ ಸ್ಥಳಾಂತರಿಸುವ ಎಚ್ಚರಿಕೆ ನೀಡಿದ್ದರು. ಇದರಿಂದ ರೊಚ್ಚಿಗೆದ್ದ ಬಾಲಕರು ಮೇಲ್ವಿಚಾರಕನಿಗೆ ಗುಂಡಿಟ್ಟು ಕೊಂದು ಪರಾರಿಯಾಗಿದ್ದಾರೆ.
ಬಾಲಕರಿಗೆ ಪಿಸ್ತೂಲು ಸಿಕ್ಕಿದ್ದು ಹೇಗೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜೆಡಿಯು ಮುಖಂಡನ ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್ಪಿ ವಿಶಾಲ್ ಶರ್ಮಾ ತಿಳಿಸಿದ್ದಾರೆ. ಇವರ ಪುತ್ರ ಈ ಮೊದಲು ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಕೆಲವು ಕುಖ್ಯಾತ ರೌಡಿಗಳ ಜೊತೆ ಸಂಪರ್ಕದಲ್ಲಿದ್ದ ಎಂಬ ಆರೋಪವಿದೆ. ಅವರೇ ಈತನಿಗೆ ಬಂದೂಕು ಪೂರೈಸಿರಬಹುದು ಎಂದು ಪೊಲೀಸರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.