ನವದೆಹಲಿ: ಜೈಪುರ ಸಾಹಿತ್ಯ ಸಮ್ಮೇಳನದ ಹದಿನಾಲ್ಕನೇ ಆವೃತ್ತಿಯು ಫೆಬ್ರುವರಿಯಲ್ಲಿ ಆನ್ಲೈನ್ ಮೂಲಕ ನಡೆಯಲಿದ್ದು, ಸಮ್ಮೇಳನದಲ್ಲಿ ಭಾಗವಹಿಸುವವರ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.
ಫೆ.19–21 ಹಾಗೂ ಫೆ.26–28 ಹೀಗೆ ಎರಡು ವಾರಾಂತ್ಯದಲ್ಲಿ ಸಮ್ಮೇಳನ ನಡೆಯಲಿದೆ. ದಕ್ಷಿಣ ಆಫ್ರಿಕಾದ ಸಾಂವಿಧಾನಿಕ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿದ್ದ ಹಾಗೂ ‘ಅಪಾರ್ಟೀಡ್’(ಜನಾಂಗದ ಆಧಾರದ ಮೇಲೆ ಜನರನ್ನು ಪ್ರತ್ಯೇಕಿಸುವ ನೀತಿ) ವಿರುದ್ಧದ ಹೋರಾಟಗಾರ ಆಲ್ಬಿ ಸ್ಯಾಕ್ಸ್, ತಾತ್ತ್ವಿಕ ಭೌತವಿಜ್ಞಾನಿ ಕಾರ್ಲೊ ರೊವೆಲ್ಲಿ, ಸಂಸ್ಕೃತ ವಿದ್ವಾಂಸ ವಿವೇಕ್ ದಿಬ್ರಾಯ್, ಕಾಂಗ್ರೆಸ್ ಸಂಸದ ಶಶಿ ತರೂರ್, ಗೀತಕಾರ ಪ್ರಸೂನ್ ಜೋಶಿ ಅವರು ಭಾಗವಹಿಸಲಿದ್ದಾರೆ.
‘ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ, ರಾಜಕೀಯ ಮತ್ತು ಇತಿಹಾಸ, ಪರಿಸರ ಮತ್ತು ಹವಾಮಾನ ಬದಲಾವಣೆ, ಮಾನಸಿಕ ಆರೋಗ್ಯ, ಉದ್ಯಮ ಮತ್ತು ಆರ್ಥಿಕತೆ, ಭಾಷಾಂತರ, ಕವಿತೆ ಹಾಗೂ ಸಂಗೀತ, ಆಹಾರ ಮತ್ತು ಸಾಹಿತ್ಯ ಮುಂದಾತದ ವಿಷಯಾಧಾರಿತ ಚರ್ಚೆಗಳು ಸಮ್ಮೇಳನದಲ್ಲಿ ನಡೆಯಲಿವೆ’ ಎಂದು ಲೇಖಕಿ, ಜೆಎಲ್ಎಫ್ನ ಸಹ ನಿರ್ದೇಶಕಿ ನಮಿತಾ ಗೋಖಲೆ ಅವರು ತಿಳಿಸಿದ್ದಾರೆ.
‘ಆಸ್ಟ್ರೇಲಿಯಾದ ಪತ್ರಕರ್ತ ಜಾನ್ ಜುಬ್ರಾಸ್ಕಿ, ಬ್ರಿಟನ್ನ ವಕೀಲರಾದ ಮರೀನಾ ವ್ಹೀಲರ್, ಅಮೆರಿಕದ ರಾಜಕೀಯ ತತ್ತ್ವಜ್ಞಾನಿ ಮೈಕಲ್ ಸ್ಯಾಂಡೆಲ್, ಲೇಖಕರಾದ ಮೊಯಿನ್ ಮಿರ್, ಆಲಿವರ್ ಕ್ರಾಸ್ಕೆ, ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿದ್ದ, ಲೇಖಕ ನವ್ತೇಜ್ ಸರ್ನಾ, ಇತಿಹಾಸಕಾರರಾದ ರಾಮಚಂದ್ರ ಗುಹಾ, ಪ್ರಿಯಾ ಅಟ್ವಾಲ್, ಶೇಖರ್ ಪಾಠಕ್ ಮುಂತಾದವರೂ ಭಾಗವಹಿಸಲಿದ್ದಾರೆ’ ಎಂದು ಉಲ್ಲೇಖಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.