ಜೈಪುರ ಸಾಹಿತ್ಯೋತ್ಸವ ಪೋಸ್ಟರ್
ಜೈಪುರ: ಭಾರತದಲ್ಲಿನ ಪ್ಯಾಲೆಸ್ಟೀನ್ ರಾಯಭಾರಿ ಅಬೆದ್ ಎಲ್ರಾಜೆಗ್ ಅಬು ಜಾಜೆರ್ ಅವರ ಜೊತೆ ಜೈಪುರ ಸಾಹಿತ್ಯೋತ್ಸವ (ಜೆಎಲ್ಎಫ್) ನಡೆಯುತ್ತಿರುವ ಸ್ಥಳದಲ್ಲಿ ಪಿಟಿಐ ಸುದ್ದಿಸಂಸ್ಥೆಯ ಪ್ರತಿನಿಧಿಗಳು ಸಂದರ್ಶನ ನಡೆಸುತ್ತಿದ್ದ ಜಾಗಕ್ಕೆ ನುಗ್ಗಿದ ಜೆಎಲ್ಎಫ್ ಅಧಿಕಾರಿಯೊಬ್ಬರು, ಒತ್ತಾಯದಿಂದ ಸಂದರ್ಶನ ಸ್ಥಗಿತಗೊಳಿಸಲು ಮುಂದಾದರು, ಪತ್ರಕರ್ತೆಯೊಬ್ಬರನ್ನು ಪಕ್ಕಕ್ಕೆ ತಳ್ಳಿದರು.
ಸಾಹಿತ್ಯೋತ್ಸವದ ಆರಂಭದ ದಿನ ಈ ಘಟನೆ ನಡೆದಿದೆ. ಈ ರೀತಿ ಆಗಿದ್ದರಿಂದಾಗಿ ಅಬು ಜಾಜೆರ್ ಅವರು ಆಘಾತಕ್ಕೆ ಒಳಗಾದಂತೆ ಕಂಡುಬಂತು. ಸುದ್ದಿಸಂಸ್ಥೆಯ ಪ್ರತಿನಿಧಿಗಳ ಜೊತೆ ತಾವು ಮಾತನಾಡುವುದನ್ನು ಜೆಎಲ್ಎಫ್ ಅಧಿಕಾರಿಯು ಯಾವ ಅಧಿಕಾರ ಬಳಸಿ ತಡೆಯುತ್ತಿದ್ದಾರೆ ಎಂದು ಪ್ರಶ್ನಿಸಿದರು.
‘ನಾನು ಇಲ್ಲಿ ಅತಿಥಿ, ಈ ಸಾಹಿತ್ಯೋತ್ಸವವನ್ನು ನಾನು ಯಾವಾಗಲೂ ಇಷ್ಟಪಡುತ್ತೇನೆ. ಜೆಎಲ್ಎಫ್ ಅಧಿಕಾರಿಯು ಬಹಳ ಒರಟಾಗಿ ನಡೆದುಕೊಂಡರು. ರಾಯಭಾರಿಯಾಗಿರುವ ನನಗೆ ಇದರಿಂದ ಏನೂ ಆಗುವುದಿಲ್ಲ. ಆದರೆ ಜೆಎಲ್ಎಫ್ ಆಯೋಜಕರು ಮಾಧ್ಯಮ ಪ್ರತಿನಿಧಿಗಳನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬ ಬಗ್ಗೆ ಪ್ರಶ್ನೆಗಳು ಮೂಡುತ್ತವೆ’ ಎಂದು ಅಬು ಜಾಜೆರ್ ಅವರು ಹೇಳಿದರು.
ಪಿಟಿಐ ಪತ್ರಕರ್ತರು ಹಾಗೂ ಅಬು ಜಾಜೆರ್ ಅವರ ಜೊತೆ ಬಿರುಸಿನ ಮಾತುಕತೆ ನಡೆಯುತ್ತಿದ್ದ ಹೊತ್ತಿನಲ್ಲಿ ಆ ಜೆಎಲ್ಎಫ್ ಅಧಿಕಾರಿಯು, ‘ಈ ಸಂದರ್ಶನಕ್ಕೆ ನಮ್ಮ ಪಿಆರ್ (ಸಾರ್ವಜನಿಕ ಸಂಪರ್ಕ) ತಂಡದಿಂದ ಅನುಮತಿ ಇಲ್ಲ’ ಎಂದರು. ಅಬು ಜಾಜೆರ್ ಅವರು ಕಾರ್ಯಕ್ರಮದಲ್ಲಿ ಭಾಷಣಕಾರ ಆಗಿ ಭಾಗವಹಿಸುತ್ತಿಲ್ಲ, ಅವರು ಕಾರ್ಯಕ್ರಮದ ಹಿತೈಷಿ ಮಾತ್ರ ಎಂದು ಅಧಿಕಾರಿ ವಾದಿಸಿದರು.
ಅಬು ಜಾಜೆರ್ ಅವರು ಮಾತನಾಡುವ ಸಂದರ್ಭದಲ್ಲಿ ಅವರ ಹಿಂದೆ ಜೆಎಲ್ಎಫ್ನ ಲಾಂಛನ ಇತ್ತು. ಅಬು ಅವರು ಹೇಳುವ ಮಾತುಗಳನ್ನು ಜೆಎಲ್ಎಫ್ನ ಮಾತುಗಳು ಎಂದು ಪರಿಗಣಿಸಲು ಅವಕಾಶ ಇಲ್ಲ ಎಂದೂ ಅಧಿಕಾರಿ ತಿಳಿಸಿದರು.
ಈ ಘಟನೆ ನಡೆದ ನಂತರ ಜೆಎಲ್ಎಫ್ನ ಹಿರಿಯ ಪ್ರತಿನಿಧಿಗಳು ರಾಯಭಾರಿಯನ್ನು ಭೇಟಿ ಮಾಡಿದರು. ಮಾಧ್ಯಮ ಜಗಲಿಯ ಹೊರಗೆ ಸಂದರ್ಶನ ನಡೆಸಬಹುದು, ಅಲ್ಲಿ ಜೆಎಲ್ಎಫ್ನ ಲಾಂಛನ ಅಥವಾ ಹೆಸರು ಇರುವಂತಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ನಡೆದಿರುವ ಘಟನೆಯ ಬಗ್ಗೆ ಜೆಎಲ್ಎಫ್ನ ಕೆಲವು ಪ್ರತಿನಿಧಿಗಳು ಕ್ಷಮೆ ಯಾಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.