ADVERTISEMENT

‘ಜಿತೇಗಾ ಪಂಜಾಬ್‌’ ಸಾಧಿಸುವ ಗುರಿ: ನವಜೋತ್‌ ಸಿಂಗ್‌ ಸಿಧು

’ಪ್ರಯಾಣ ಈಗಷ್ಟೇ ಆರಂಭ, ಎಲ್ಲರ ಜೊತೆಗೂಡಿ ಕೆಲಸ‘

ಪಿಟಿಐ
Published 19 ಜುಲೈ 2021, 14:57 IST
Last Updated 19 ಜುಲೈ 2021, 14:57 IST
ಪಂಜಾಬ್‌ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಪಿಸಿಸಿ) ಅಧ್ಯಕ್ಷರಾಗಿ ನೇಮಕಗೊಂಡಿರುವ ನವಜೋತ್ ಸಿಂಗ್‌ ಸಿಧು ಸೋಮವಾರ ಪಟಿಯಾಲದ ತನ್ನ ನಿವಾಸದಲ್ಲಿ ಬೆಂಬಲಿಗರ ಜೊತೆಗೆ ಸಂಭ್ರಮದಲ್ಲಿ ಭಾಗಿಯಾಗಿರುವುದು
ಪಂಜಾಬ್‌ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಪಿಸಿಸಿ) ಅಧ್ಯಕ್ಷರಾಗಿ ನೇಮಕಗೊಂಡಿರುವ ನವಜೋತ್ ಸಿಂಗ್‌ ಸಿಧು ಸೋಮವಾರ ಪಟಿಯಾಲದ ತನ್ನ ನಿವಾಸದಲ್ಲಿ ಬೆಂಬಲಿಗರ ಜೊತೆಗೆ ಸಂಭ್ರಮದಲ್ಲಿ ಭಾಗಿಯಾಗಿರುವುದು   

ಚಂಡೀಗಡ: ‘ಪ್ರಯಾಣ ಈಗಷ್ಟೇ ಆರಂಭವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಕುಟುಂಬದ ಪ್ರತಿಯೊಬ್ಬರ ಜೊತೆಗೂಡಿ ಕಾರ್ಯನಿರ್ವಹಿಸುತ್ತೇನೆ’ ಎಂದು ಪಂಜಾಬ್‌ ರಾಜ್ಯ ಘಟಕದ ಕಾಂಗ್ರೆಸ್‌ ನೂತನ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ಹೇಳಿದರು.

ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ತಕರಾರಿನ ನಡುವೆಯೂ ಕಾಂಗ್ರೆಸ್‌ ಹೈಕಮಾಂಡ್‌ ರಾಜ್ಯ ಕಾಂಗ್ರೆಸ್ ಸಾರಥಿಯಾಗಿ ಸಿಧು ಅವರನ್ನು ನೇಮಿಸಿದೆ. ಹಾಲಿ ಅಧ್ಯಕ್ಷ ಸುನಿಲ್‌ ಜಾಖರ್‌ ಸ್ಥಾನದಲ್ಲಿ ಸಿಧು ಅಧಿಕಾರ ವಹಿಸಿಕೊಂಡಿದ್ದಾರೆ.

‘ಅಧ್ಯಕ್ಷರಾಗಿ ತಮ್ಮನ್ನು ನೇಮಿಸಿದ್ದಕ್ಕೆ ಹೈಕಮಾಂಡ್‌ಗೆ ಕೃತಜ್ಞತೆ ಸಲ್ಲಿಸಿದ ಅವರು, ‘ಜಿತೇಗಾ ಪಂಜಾಬ್‌’ ಗುರಿ ಸಾಧಿಸಲು ಪಕ್ಷದ ಎಲ್ಲರ ಜೊತೆಗೂಡಿ ಕಾರ್ಯನಿರ್ವಹಿಸಲಿದ್ದು, ಪಕ್ಷವನ್ನು ಬಲಪಡಿಸಲಾಗುವುದು’ಎಂದು ಭರವಸೆ ನೀಡಿದರು.

ADVERTISEMENT

ಈ ಕುರಿತಂತೆ ಟ್ವೀಟ್‌ ಮಾಡಿರುವ ಸಿಧು, ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಅವರ ಜೊತೆಗೆ ತಮ್ಮ ತಂದೆ ಇರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

‘ಅಭ್ಯುದಯ, ಹಕ್ಕು ಮತ್ತು ಸ್ವಾತಂತ್ರ್ಯವನ್ನು ಎಲ್ಲರೊಂದಿಗೆ ಹಂಚಿಕೆ ಮಾಡಿಕೊಳ್ಳಬೇಕು. ನನ್ನ ತಂದೆಯೂ ಕಾಂಗ್ರೆಸ್‌ ಕಾರ್ಯಕರ್ತರಾಗಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು’ ಎಂದು ಸಿಧು ಟ್ವೀಟ್‌ನಲ್ಲಿ ಸ್ಮರಿಸಿದ್ದಾರೆ. ಸಿಧು ನೇಮಕದ ಹಿಂದೆಯೇ ಅಮೃತಸರ, ಪಟಿಯಾಲದಲ್ಲಿ ಬೆಂಬಲಿಗರು ದೊಡ್ಡ ಪ್ರಮಾಣದಲ್ಲಿ ಸಂಭ್ರಮದಲ್ಲಿ ಭಾಗಿಯಾಗಿದ್ದರು.

ನಾಲ್ವರು ಕಾರ್ಯಾಧ್ಯಕ್ಷರು: ಪಂಜಾಬ್‌ನಲ್ಲಿ ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಸಿಧು ಅವರೊಂದಿಗೆ ನಾಲ್ವರು ಕಾರ್ಯಾಧ್ಯಕ್ಷರನ್ನು ಹೈಕಮಾಂಡ್‌ ನೇಮಕ ಮಾಡಿದೆ.

ಸಿಧು ಅವರು ಸಾರ್ವತ್ರಿಕ ಚುನಾವಣೆಯಲ್ಲಿ ಹೊಸ ಉತ್ಸಾಹದೊಂದಿಗೆ ಪಕ್ಷವನ್ನು ಗೆಲುವಿನತ್ತ ಮುನ್ನಡೆಸಬಹುದು ಎಂಬುದು ಹೈಕಮಾಂಡ್‌ನ ಆಶಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.