ADVERTISEMENT

‘ನ್ಯಾಯಾಧೀಶರೇ ನ್ಯಾಯಾಧೀಶರನ್ನು ನೇಮಿಸುತ್ತಾರೆ’ ಎಂಬುದು ಮಿಥ್ಯೆ: ಸಿಜೆಐ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2021, 15:22 IST
Last Updated 26 ಡಿಸೆಂಬರ್ 2021, 15:22 IST
ಎನ್‌.ವಿ.ರಮಣ
ಎನ್‌.ವಿ.ರಮಣ   

ಅಮರಾವತಿ: ‘ನ್ಯಾಯಾಧೀಶರೇ ನ್ಯಾಯಾಧೀಶರನ್ನು ನೇಮಿಸಿಕೊಳ್ಳುತ್ತಾರೆ’ ಎಂಬುದು ಮಿಥ್ಯೆಯಾಗಿದೆ. ನ್ಯಾಯಾಂಗದ ಅಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಹಲವು ಸಂಸ್ಥೆಗಳಲ್ಲಿ ನ್ಯಾಯಾಂಗವೂ ಒಂದು ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಭಾನುವಾರ ತಿಳಿಸಿದರು.

ವಿಜಯವಾಡದ ಸಿದ್ಧಾರ್ಥ ಕಾನೂನು ಕಾಲೇಜಿನಲ್ಲಿ ಅವರು ‘ಭಾರತೀಯ ನ್ಯಾಯಾಂಗ - ಭವಿಷ್ಯದ ಸವಾಲುಗಳು’ ಕುರಿತು ದತ್ತಿ ಉಪನ್ಯಾಸ ನೀಡಿದರು.

ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗದ ಅಧಿಕಾರಿಗಳ ಮೇಲೆ ದೈಹಿಕ ಹಲ್ಲೆಗಳು ಹೆಚ್ಚುತ್ತಿವೆ. ಇನ್ನು ಕಕ್ಷಿದಾರರಿಗೆ ಪೂರಕವಾಗಿ ಆದೇಶಗಳು ಬಾರದಿದ್ದಾಗ ಅವರಿಂದ ಮುದ್ರಣ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ನ್ಯಾಯಾಧೀಶರ ವಿರುದ್ಧ ಸಂಘಟಿತ ಅಪಪ್ರಚಾರಗಳೂ ನಡೆಯುತ್ತಿವೆ. ಇವೂ ಪ್ರಾಯೋಜಿತ ದಾಳಿಗಳೇ ಆಗಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ADVERTISEMENT

ಸರ್ಕಾರಿ ವಕೀಲರ ನೇಮಕ ವ್ಯವಸ್ಥೆಯನ್ನು ಸ್ವತಂತ್ರಗೊಳಿಸುವ ಅಗತ್ಯವಿದೆ. ಅವರು ನ್ಯಾಯಾಲಯಗಳಿಗೆ ಮಾತ್ರ ಉತ್ತರಿಸುವಂತಿರಬೇಕು ಎಂದು ಅವರು ಪ್ರತಿಪಾದಿಸಿದರು.

ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ (ವೇತನ ಮತ್ತು ಸೇವಾ ಷರತ್ತುಗಳು) ತಿದ್ದುಪಡಿ ಮಸೂದೆ, 2021ರ ಕುರಿತು ಇತ್ತೀಚೆಗೆಸಂಸತ್ತಿನಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಕೇರಳ ಸಂಸದ ಜಾನ್ ಬ್ರಿಟಾಸ್ ಅವರು ‘ನ್ಯಾಯಾಧೀಶರು ನ್ಯಾಯಾಧೀಶರನ್ನು ನೇಮಿಸುವುದು ಎಲ್ಲಿಯೂ ಕೇಳಿಲ್ಲ’ ಎಂದು ಹೇಳಿದ್ದರು.

‘ಸತ್ಯವೇನೆಂದರೆ, ಕೇಂದ್ರ ಕಾನೂನು ಸಚಿವಾಲಯ, ರಾಜ್ಯ ಸರ್ಕಾರಗಳು, ರಾಜ್ಯಪಾಲರು, ಹೈಕೋರ್ಟ್ ಕೊಲಿಜಿಯಂ, ಗುಪ್ತಚರ ಬ್ಯೂರೊ ಸೇರಿದಂತೆ ಹಲವು ಅಧಿಕಾರಿಗಳು ನ್ಯಾಯಾಧೀಶರ ನೇಮಕ ಪ್ರಕ್ರಿಯೆಯಲ್ಲಿ ಇರುತ್ತಾರೆ’ ಎಂದು ಸಿಜೆಐ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.