ADVERTISEMENT

ಜನರ ಪಾಲ್ಗೊಳ್ಳವಿಕೆಗೂ ಮನ್ನಣೆ ಬೇಕಿತ್ತು: ನ್ಯಾಯಮೂರ್ತಿ ಖನ್ನಾ

ಸೆಂಟ್ರಲ್‌ ವಿಸ್ತಾ ಯೋಜನೆಗೆ ಅನುಮೋದನೆ: ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ನ್ಯಾ.ಖನ್ನಾ

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 15:14 IST
Last Updated 5 ಜನವರಿ 2021, 15:14 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಸೆಂಟ್ರಲ್‌ ವಿಸ್ತಾ ಯೋಜನೆಯಡಿ ಜಮೀನಿನ ಬಳಕೆ ಕುರಿತಂತೆ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠದದಲ್ಲಿರುವ ನ್ಯಾಯಮೂರ್ತಿ ಸಂಜೀವ್‌ ಖನ್ನಾ ತಮ್ಮ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದರು.

ಪರಂಪರೆ ಸಂರಕ್ಷಣಾ ಸಮಿತಿ, ತಜ್ಞರ ಸಮಿತಿಯು ಈ ಯೋಜನೆಗೆ ಅನುಮೋದನೆ ನೀಡುವ ಮುನ್ನ ಜನರ ಅಭಿಪ್ರಾಯಗಳನ್ನು ಪರಿಗಣಿಸಬೇಕಿತ್ತು ಎಂದು ನ್ಯಾಯಮೂರ್ತಿ ಖನ್ನಾ ಪ್ರತಿಪಾದಿಸಿದರು.

ಸೆಂಟ್ರಲ್‌ ವಿಸ್ತಾ ಯೋಜನೆಗೆ ಕೇಂದ್ರ ಸರ್ಕಾರ ನೀಡಿದ್ದ ಅಧಿಸೂಚನೆ ಮತ್ತು ಪರಿಸರ ಇಲಾಖೆ ಅನುಮತಿ ನೀಡಿದ್ದನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಎ.ಎಂ.ಖಾನ್ವೀಲ್ಕರ್‌ ನೇತೃತ್ವದ ತ್ರಿಸದಸ್ಯ ಪೀಠ 2:1 ಬಹುಮತದೊಂದಿಗೆ ಮಂಗಳವಾರ ಎತ್ತಿ ಹಿಡಿದಿದೆ. ನ್ಯಾಯಮೂರ್ತಿ ದಿನೇಶ್‌ ಮಾಹೇಶ್ವರಿ ಈ ನ್ಯಾಯಪೀಠದ ಮತ್ತೊಬ್ಬ ಸದಸ್ಯ.

ADVERTISEMENT

‘ಈ ಯೋಜನೆಗೆ ಬಳಸಲು ಉದ್ದೇಶಿಸಿದ ಜಮೀನಿನ ವಿವರ, ನಿವೇಶನಗಳ ಸಂಖ್ಯೆಗಳನ್ನು ಒಳಗೊಂಡ ಅಧಿಸೂಚನೆಯನ್ನು ಬಹಿರಂಗಗೊಳಿಸಿದರೆ ಸಾಲದು. ಸ್ವಾಧೀನಪಡಿಸಿಕೊಂಡ ಜಾಗವನ್ನು ಹೇಗೆ ಅಭಿವೃದ್ಧಿ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಸಹ ಬಹಿರಂಗಗೊಳಿಸಬೇಕಿತ್ತು’ ಎಂದು ನ್ಯಾ.ಖನ್ನಾ ಹೇಳಿದರು.

‘ಯೋಜನೆ ಕುರಿತ ಸಮಗ್ರ ಮಾಹಿತಿಯನ್ನು ಜನರ ಮುಂದಿಡುವುದರಿಂದ, ಅವರಿಗೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿತ್ತು. ಯೋಜನೆ ಅನುಷ್ಠಾನ ಪ್ರಕ್ರಿಯೆ ಯಾಂತ್ರಿಕವಾಗಿರದೇ, ಹೆಚ್ಚು ರಚನಾತ್ಮಕವಾಗಿರುತ್ತಿತ್ತು’ ಎಂದೂ ಹೇಳಿದರು.

‘ಸೆಂಟ್ರಲ್‌ ವಿಸ್ತಾ ನಿರ್ಮಾಣಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ತಿಳಿದುಕೊಳ್ಳುವ ಹಕ್ಕು ಜನರಿಗಿದೆ. ತಮ್ಮ ಅಭಿಪ್ರಾಯಗಳನ್ನು ಹೇಳಲು, ಸಲಹೆ–ಸೂಚನೆಗಳನ್ನು ನೀಡಲು ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ಸಹ ಜನರಿಗೆ ಹಕ್ಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.