ADVERTISEMENT

ಪ್ರತೀಕಾರದ ರೂಪದಲ್ಲಿ ನ್ಯಾಯ ಪಡೆಯಬಾರದು: ಎನ್‌ಕೌಂಟರ್ ಬಗ್ಗೆ ಸಿಜೆಐ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 1:57 IST
Last Updated 8 ಡಿಸೆಂಬರ್ 2019, 1:57 IST
   

ನವದೆಹಲಿ: ಹೈದರಾಬಾದ್‌ನ ಪಶುವೈದ್ಯೆ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳ ಎನ್‌ಕೌಂಟರ್‌ ಕುರಿತುಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್‌. ಎ ಬೋಬಡೆ ಮಾತನಾಡಿದ್ದಾರೆ.

‘ನ್ಯಾಯವನ್ನು ಪ್ರತೀಕಾರದ ರೂಪದಲ್ಲಿ ಪಡೆಯಬಾರದು. ಒಂದು ವೇಳೆ ಪ್ರತೀಕಾರದ ರೂಪದಲ್ಲಿ ನ್ಯಾಯವನ್ನು ಪಡೆದುಕೊಂಡಿದ್ದೇ ಅದರೆ, ಅದು ನ್ಯಾಯದ ಸ್ವರೂಪವನ್ನೇ ಕಳೆದುಕೊಳ್ಳುತ್ತದೆ,’ ಎಂದು ಅವರುಹೇಳಿದ್ದಾರೆ.

ದೇಶದ ಇತ್ತೀಚಿನ ಘಟನೆಗಳು ಬಹುಚರ್ಚಿತ ಹಳೇಯ ಸಂಗತಿಗಳನ್ನೇಹೊಸ ಕಿಡಿಯೊಂದಿಗೆ ಮತ್ತೆ ಮುನ್ನೆಲೆಗೆ ತಂದಿವೆ. ಅಪರಾಧ ಪ್ರಕರಣಗಳಲ್ಲಿನ ನ್ಯಾಯದಾನ ವ್ಯವಸ್ಥೆಯ ಸದ್ಯದ ಸ್ಥಿತಿಯನ್ನು ಮತ್ತು ಪಕ್ರರಣಗಳ ಇತ್ಯರ್ಥಕ್ಕೆ ತೆಗೆದುಕೊಳ್ಳುತ್ತಿರುವ ಸಮಯದ ಕುರಿತು ಪರಾಮರ್ಶೆಗಳಾಗಬೇಕಿವೆ. ಆದರೆ, ನ್ಯಾಯ ಎಂಬುದು ಎಂದಿಗೂ ಅವಸರದಲ್ಲಿ ಸಿಗಬೇಕು ಎಂದು ನಾನು ನಂಬಿಲ್ಲ ಎಂದು ಸಿಜೆಐ ಹೇಳಿದ್ದಾರೆ.

ADVERTISEMENT

‘ನ್ಯಾಯಾಂಗ ವ್ಯವಸ್ಥೆಯಲ್ಲಿ ಸ್ವಯಂ ಪರಿಹಾರ ಕ್ರಮಗಳ ಅಗತ್ಯವಿದೆ. ಆ ಪರಿಹಾರ ಕ್ರಮಗಳು ಬಹಿರಂಗ ಆಗಬೇಕೋ, ಬೇಡವೋಎಂಬುದು ಚರ್ಚೆಯ ವಿಷಯವಾಗಬೇಕು. ಆದರೆ, ನ್ಯಾಯಾಂಗ ವ್ಯವಸ್ಥೆಯು ಈ ಹಿಂದೆ ನ್ಯಾಯಮೂರ್ತಿಗಳ ಮಹಾ ಸುದ್ದಿಗೋಷ್ಠಿಯಂತೆ ತನ್ನನ್ನು ತಾನು ಸರಿಪಡಿಸಿಕೊಳ್ಳಬೇಕು. ಆ ಪತ್ರಿಕಾಗೋಷ್ಠಿಯುಸ್ವಯಂ ಪರಿಹಾರ ಮಾರ್ಗವಾಗಿತ್ತು,’ ಎಂದೂ ಮುಖ್ಯನ್ಯಾಯಮೂರ್ತಿಗಳು ಹೇಳಿದ್ದಾರೆ.

ಹೈದರಾಬಾದ್‌ನ ಪಶುವೈದ್ಯ ಮೇಲೆ ಅತ್ಯಾಚಾರ ನಡೆಸಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಶುಕ್ರವಾರ ಮುಂಜಾನೆ ಎನ್‌ಕೌಂಟರ್‌ನಲ್ಲಿ ಕೊಂದಿದ್ದರು. ಈ ಬೆಳವಣಿಗೆ ದೇಶದಲ್ಲಿ ಬಹುತೇಕರ ಮೆಚ್ಚುಗೆಗೆ ಕಾರಣವಾಗಿದ್ದ ಹೊತ್ತಲ್ಲೇ, ವಿರೋಧಗಳೂ ಕೇಳಿ ಬಂದಿದ್ದವು. ಇದು ದೇಶವನ್ನು ಅಭಿಪ್ರಾಯ ಬೇಧಕ್ಕೆ ದೂಡಿತ್ತು. ಹೀಗಿರುವಾಗಲೇ ಮಾತನಾಡಿರುವ ಮುಖ್ಯನ್ಯಾಯಮೂರ್ತಿಗಳು, ಪ್ರತೀಕಾರದ ರೂಪದಲ್ಲಿ ನ್ಯಾಯವನ್ನು ಪಡೆಯಬಾರದು ಎಂದು ಹೇಳಿರುವುದು ಮಹತ್ವ ಪಡೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.