ಚೆನ್ನೈ: ಸೋಂಕು ಹರಡುವುದನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ಸಮರ್ಪಕ ಸಿದ್ಧತೆ ಇಲ್ಲದೇ 21 ದಿನಗಳ ಲಾಕ್ಡೌನ್ ಘೋಷಿಸಿದರು. ಇದರಿಂದ ಬಡವರು ಹಾಗೂ ದುರ್ಬಲ ವರ್ಗದವರು ಮತ್ತಷ್ಟು ಸಂಕಷ್ಟಕ್ಕೀಡಾಗುವಂತಾಗಿದೆ ಎಂದು ನಟ ಹಾಗೂ ಮಕ್ಕಳ್ ನೀಧಿ ಮಯ್ಯಂ ನಾಯಕ ಕಮಲ್ ಹಾಸನ್ ಟೀಕಿಸಿದ್ದಾರೆ.
ಪ್ರಧಾನಿಗೆ ಮೂರು ಪುಟಗಳ ಬಹಿರಂಗ ಪತ್ರ ಬರೆದಿರುವ ಕಮಲ್ ಹಾಸನ್, ‘ಈ ಸಮಯದಲ್ಲಿ ನೀವು ತೋರಬೇಕಿದ್ದ ಜವಾಬ್ದಾರಿಯುತ ವರ್ತನೆಯನ್ನು ಈ ದೇಶದ ಸಾಮಾನ್ಯ ಜನರಿಗೆ ಹೊರಗುತ್ತಿಗೆ ನೀಡಿದಂತೆ, ಪಾರದರ್ಶಕತೆ ಏನಿದ್ದರೂ ರಾಜ್ಯಗಳಿಗೆ ಸಂಬಂಧಿಸಿದ್ದು ಎಂಬಂತೆ ನಿಮ್ಮ ನಡವಳಿಕೆ ಇದೆ’ ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.
‘ಈ ಬಾರಿ ನಿಮ್ಮ ದೂರದೃಷ್ಟಿಯೇ ಸರಿ ಇಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ಬಡವರಿಗೆ ನೆರವಿನ ಹಸ್ತ ಚಾಚಿ, ಅವರನ್ನು ಮೇಲಕ್ಕೆತ್ತಬೇಕಿತ್ತು.
ಆದರೆ, ಈಗಾಗಲೇ ಮಧ್ಯಮ ವರ್ಗದ ಜನರಿಂದ ರಚಿಸಿಕೊಂಡಿರುವ ಭದ್ರಕೋಟೆಯಲ್ಲಿ ನೀವು ರಕ್ಷಣೆ ಪಡೆದಿದ್ದೀರಿ. ಕೋವಿಡ್–19 ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದಾಗ ದೇಶದ ಜನತೆ ನಿರೀಕ್ಷೆಯೊಂದಿಗೆ ನಿಮ್ಮತ್ತ ನೋಡುತ್ತಿತ್ತು. ಆದರೆ, ನೀವು ಮಾತ್ರ ಪಕ್ಕಾ ಚುನಾವಣಾ ಪ್ರಚಾರ ಭಾಷಣದ ಶೈಲಿಯಲ್ಲಿಯೇ ಮಾತನಾಡಿದಿರಿ’ ಎಂದೂ ಪತ್ರದಲ್ಲಿ ಟೀಕಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.