ಭೋಪಾಲ್: ಮಧ್ಯಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟು ಶುಕ್ರವಾರ ಮಹತ್ವದ ತಿರುವು ಪಡೆದಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ಕಮಲ್ ನಾಥ್ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ವಿಶ್ವಾಸಮತ ಯಾಚನೆಗೂ ಮುನ್ನವೇ ಕಾಂಗ್ರೆಸ್ ಸರ್ಕಾರ ಪತನಗೊಂಡಂತಾಗಿದೆ.
ಕಾಂಗ್ರೆಸ್ನ 16 ಬಂಡಾಯ ಶಾಸಕರ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ವಿಧಾನಸಭೆ ಸ್ಪೀಕರ್ ಎನ್.ಪಿ. ಪ್ರಜಾಪತಿ ಶುಕ್ರವಾರ ಬೆಳಿಗ್ಗೆ ಘೋಷಿಸಿದ್ದರು. ಇದರೊಂದಿಗೆ ಪಕ್ಷದ ಒಟ್ಟು 22 ಶಾಸಕರ ರಾಜೀನಾಮೆ ಅಂಗೀಕಾರವಾದಂತಾಯಿತು. ಸರ್ಕಾರ ಅಲ್ಪಮತಕ್ಕೆ ಕುಸಿದ ಪರಿಣಾಮ ರಾಜೀನಾಮೆ ನೀಡುವುದು ಕಮಲ್ ನಾಥ್ಗೆ ಅನಿವಾರ್ಯವಾಯಿತು.
ಶುಕ್ರವಾರ ಸಂಜೆಯೊಳಗೆ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಸೂಚಿಸಿತ್ತು.
ಬಿಜೆಪಿ ವಿರುದ್ಧ ಆಕ್ರೋಶ: ರಾಜಿನಾಮೆ ನಿರ್ಧಾರ ಪ್ರಕಟಿಸುವುದಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಮಲ್ ನಾಥ್ ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
‘ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸಿದ ಮೊದಲ ದಿನದಿಂದಲೂ ಬಿಜೆಪಿ ನಮ್ಮ ವಿರುದ್ಧ ಸಂಚು ಹೂಡಿದೆ. ಬಿಜೆಪಿ ಮಧ್ಯಪ್ರದೇಶದ ಜನರಿಗೆ ದ್ರೋಹ ಬಗೆದಿದೆ’ ಎಂದು ಅವರು ಆರೋಪಿಸಿದರು.
‘ಕಳೆದ 15 ತಿಂಗಳುಗಳಲ್ಲಿ ಮಧ್ಯಪ್ರದೇಶದ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸಿದ್ದೇನೆ. ಬಿಜೆಪಿಗೆ 15 ವರ್ಷಗಳು ದೊರೆತಿದ್ದವು, ಆದರೆ ನನಗೆ 15 ತಿಂಗಳುಗಳಷ್ಟೇ ದೊರೆತವು. ಈ ಅವಧಿಯಲ್ಲಿ ಬಿಜೆಪಿ ಹೂಡಿದ ಸಂಚು ಏನೆಂಬುದು ಮಧ್ಯಪ್ರದೇಶದ ಜನತೆಗೆ ತಿಳಿದಿದೆ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಬಿಜೆಪಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ. ನಾವು ಮಾಡಿರುವ ಕೆಲಸಗಳು ಜನರಿಗೆ ತಿಳಿದಿದೆ. ಅವರೇ ನ್ಯಾಯ ಒದಗಿಸಿಕೊಡಲಿದ್ದಾರೆ’ ಎಂದು ಕಮಲ್ ನಾಥ್ ಹೇಳಿದರು.
ಬಳಿಕ ಕಾಂಗ್ರೆಸ್ ಸರ್ಕಾರದ ಕೆಲಸಗಳನ್ನು ಪಟ್ಟಿ ಮಾಡಿದ ಅವರು ರಾಜೀನಾಮೆ ನಿರ್ಧಾರ ಪ್ರಕಟಿಸಿದರು.
ಮಧ್ಯಪ್ರದೇಶ ವಿಧಾನಸಭೆ ಈಗಿನ (ಶಾಸಕರ ರಾಜೀನಾಮೆ ಬಳಿಕ)ಸಂಖ್ಯಾಬಲ
ಒಟ್ಟು ಸ್ಥಾನಗಳು – 206
ಕಾಂಗ್ರೆಸ್ – 92
ಬಿಜೆಪಿ – 107
ಪಕ್ಷೇತರರು –4
ಬಿಎಸ್ಪಿ – 2
ಎಸ್ಪಿ – 1
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.