ಮುಂಬೈ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ಅಪಹಾಸ್ಯ ಮಾಡಿ ವಿವಾದಕ್ಕೆ ಸಿಲುಕಿರುವ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಕಾಮ್ರಾ ಅವರು ‘ಭಾರತ ವಿರೋಧಿ’ ವಿದೇಶಿ ಸಂಘಟನೆಗಳಿಂದ ಹಣ ಪಡೆದಿದ್ದಾರೆ ಎಂದು ಶಿವಸೇನಾ ನಾಯಕ ಸಂಜಯ್ ನಿರುಪಮ್ ಶನಿವಾರ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರುಪಮ್, ‘ಕಾಮ್ರಾ ಅವರು ಕೆನಡಾ, ಆಸ್ಟ್ರೇಲಿಯಾ, ಕತಾರ್, ಸೌದಿ ಅರೇಬಿಯಾ ಹಾಗೂ ಅಮೆರಿಕದಲ್ಲಿನ ಸಂಘಟನೆಗಳಿಂದ ₹4 ಕೋಟಿ ದೇಣಿಗೆಯನ್ನು ಪಡೆದಿದ್ದಾರೆ. ದೇಣಿಗೆ ನೀಡಿರುವ ಬಹುತೇಕರು ಒಂದೇ ಧರ್ಮದವರು. ಕಾಮ್ರಾಗೆ ನೆರವು ನೀಡುವಂತೆ ದೇಣಿಗೆ ನೀಡಿರುವವರಿಗೆ ‘ಫತ್ವಾ’ ಹೊರಡಿಸಲಾಗಿತ್ತೇ’ ಎಂದು ಪ್ರಶ್ನಿಸಿದ್ದಾರೆ.
‘ಇದು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯ ಉಲ್ಲಂಘನೆಯಾಗಿದೆ. ಈ ಬಗ್ಗೆ, ಕೇಂದ್ರೀಯ ತನಿಖಾ ಸಂಸ್ಥೆಗಳಿಗೂ ದೂರು ನೀಡಲಾಗುವುದು’ ಎಂದಿದ್ದಾರೆ.
ಶಿವಸೇನಾ (ಉದ್ಧವ್ ಬಣ) ಮುಖ್ಯಸ್ಥ ಉದ್ಧವ್ ಠಾಕ್ರೆ ನಿವಾಸ ‘ಮಾತೋಶ್ರೀ’ಯಿಂದಲೂ ಕಾಮ್ರಾಗೆ ಹಣ ನೀಡಲಾಗಿದೆ. ಕಾಮ್ರಾ ಅವರು ಅದರಿಂದಲೂ ಪ್ರಭಾವಕ್ಕೊಳಗಾಗಿದ್ದಾರೆ ಎಂದೂ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.