
ನವದೆಹಲಿ: ಕೆನಡಾದ ಸರ್ರೆಯಲ್ಲಿರುವ ಹಾಸ್ಯನಟ ಕಪಿಲ್ ಶರ್ಮಾ ಅವರ ರೆಸ್ಟೋರೆಂಟ್ ಮೇಲೆ ಆಗಸ್ಟ್ 7ರಂದು ನಡೆದ ಗುಂಡಿನ ದಾಳಿಯಲ್ಲಿ ಭಾಗಿಯಾದ ಶಂಕಿತ ಗ್ಯಾಂಗ್ಸ್ಟರ್ ಒಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಗುಂಡಿನ ದಾಳಿಗೆ ಬೇಕಾದ ಅಗತ್ಯ ಸರಕು ಸಾಗಣೆಗಳ ವ್ಯವಸ್ಥೆ ಮಾಡಿದ ಆರೋಪದ ಮೇಲೆ ಬಂಧು ಮಾನ್ ಸಿಂಗ್ ಎಂಬವನನ್ನು ಬಂಧಿಸಲಾಗಿದೆ. ದಾಳಿ ಬಳಿಕ ಪಂಜಾಬ್ನ ಲೂಧಿಯಾನದಲ್ಲಿ ಈತ ತಲೆಮರೆಸಿಕೊಂಡಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
‘ಗುಂಡಿನ ದಾಳಿಯ ಬಳಿಕ ದಾಳಿಕೋರರಿಗೆ ಕಾರನ್ನು ಒದಗಿಸಿದ್ದೇ ಅಲ್ಲದೆ ಸುರಕ್ಷಿತವಾದ ಪಾರ್ಕಿಂಗ್ ವ್ಯವಸ್ಥೆಯನ್ನೂ ಮಾಡಿಕೊಟ್ಟಿದ್ದ. ಈತ ಕೆನಡಾದ ಗ್ಯಾಂಗ್ಸ್ಟರ್ ಗೋಲ್ಡಿ ಧಿಲ್ಲೋನ್ನ ನಿಕಟವರ್ತಿಯಾಗಿದ್ದ. ವಿದೇಶದಲ್ಲಿರುವ ಉದ್ಯಮಿಗಳು ಹಾಗೂ ಗಣ್ಯವ್ಯಕ್ತಿಗಳನ್ನು ಸುಲಿಗೆ ಮಾಡಿದ ಹಲವು ಪ್ರಕರಣಗಳಲ್ಲಿಯೂ ಈತ ಭಾಗಿಯಾಗಿದ್ದ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಧಿಲ್ಲೋನ್ ಜಾಲದ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದ ಈತ, ಕಪಿಲ್ ಶರ್ಮಾ ಮೇಲೆ ಬೆದರಿಕೆಯೊಡ್ಡಲು ಸಹಕರಿಸಿದ್ದ. ಗುಂಡಿನ ದಾಳಿಯ ಬಳಿಕ ಕೆನಡಾದಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆಯೇ ಅಲ್ಲಿಂದ ತಲೆಮರೆಸಿಕೊಂಡು ಭಾರತಕ್ಕೆ ಬಂದಿಳಿದಿದ್ದ. ಆತ ಲೂಧಿಯಾನದಲ್ಲಿರುವ ಕುರಿತು ಮಾಹಿತಿ ಪಡೆದು ವಶಕ್ಕೆ ಪಡೆದಿದ್ದೇವೆ’ ಎಂದು ಹೇಳಿದ್ದಾರೆ.
ಆರೋಪಿಯಿಂದ ಚೀನಾ ನಿರ್ಮಿತ ಪಿಸ್ತೂಲ್, ಕ್ಯಾಟ್ರಿಡ್ಜ್ಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ವಿಚಾರಣೆ ಮುಂದುವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.