ನವದೆಹಲಿ: ‘ಇಂದು ಯುದ್ಧದ ಸ್ವರೂಪ ಬದಲಾಗಿದೆ. ಭಯೋತ್ಪಾದನೆ ಮಾನವ ಕುಲಕ್ಕೆ ಸವಾಲಾಗಿದೆ. ಈ ಪರೋಕ್ಷ ಯುದ್ಧಕ್ಕೆ ಮಾನವೀಯತೆ ಬಲಿಯಾಗುತ್ತಿವೆ. ಯುದ್ಧದಲ್ಲಿ ಸೋತವರು ರಾಜಕೀಯ ಉದ್ದೇಶ ಈಡೇರಿಸಿಕೊಳ್ಳಲು ಪರೋಕ್ಷ ಯುದ್ಧದ ಮೊರೆಹೋಗುತ್ತಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕಾರ್ಗಿಲ್ ವಿಜಯೋತ್ಸವದ 20ನೇ ವರ್ಷಾಚರಣೆಯ ಅಂಗವಾಗಿ ಇಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಕಿಸ್ತಾನಕ್ಕೆ ಸಂದೇಶ ರವಾನಿಸಿದ ಮೋದಿ, ‘ಕಾರ್ಗಿಲ್ ಯುದ್ಧದ ಗೆಲುವು ಭಾರತದ ಸಾಮರ್ಥ್ಯದ ಸಂಕೇತ
ವಾಗಿತ್ತು. ನಮ್ಮ ಸಶಸ್ತ್ರಪಡೆಗಳ ಕೈಯಲ್ಲಿ ದೇಶ ಸುಭದ್ರವಾಗಿದೆ’ ಎಂದರು.
ಯುದ್ಧದ ಸಂದರ್ಭದಲ್ಲಿ ಕಾರ್ಗಿಲ್ ಪ್ರದೇಶಕ್ಕೆ ಭೇಟಿನೀಡಿದ್ದ ಸಂದರ್ಭವನ್ನು ಸ್ಮರಿಸಿದ ಪ್ರಧಾನಿ, ‘ಯುದ್ಧವು ಉತ್ತುಂಗದಲ್ಲಿದ್ದಾಗ ನಾನು ಕಾರ್ಗಿಲ್ಗೆ ಭೇಟಿನೀಡಿದ್ದೆ. ನನಗೆ ಅದು ತೀರ್ಥಯಾತ್ರೆಯಾಗಿತ್ತು. ಶಿಖರದ ಮೇಲೆ ಕುಳಿತು ವೈರಿ ನಮ್ಮ ಸೈನಿಕರ ಮೇಲೆ ದಾಳಿ ನಡೆಸುತ್ತಿದ್ದರು. ಸಾವು ಕಣ್ಣಮುಂದೆ ಇದ್ದರೂ ನಮ್ಮ ಯೋಧರು ತ್ರಿವರ್ಣ ಧ್ವಜವನ್ನು ಹಿಡಿದು ಶಿಖರದ ತುತ್ತ ತುದಿಯನ್ನು ಏರಲು ಮುಂದಾಗಿದ್ದರು. ಅವರ ಧೈರ್ಯ, ಸಾಹಸ ಅಸಾಮಾನ್ಯ’ ಎಂದು ಶ್ಲಾಘಿಸಿದರು.
ಈಗ ಯುದ್ಧದ ಸ್ವರೂಪ ಬದಲಾಗಿದೆ, ಅದು ಬಾಹ್ಯಾಕಾಶವನ್ನು ತಲುಪಿದೆ. ಸೈಬರ್ ಕ್ಷೇತ್ರದ ಮೂಲಕವೂ ಯುದ್ಧ ನಡೆಯುತ್ತದೆ. ಆದ್ದರಿಂದ ರಕ್ಷಣಾ ಪಡೆಗಳ ಆಧುನೀಕರಣವು ನಮ್ಮ ಆದ್ಯತೆ ಮಾತ್ರವಲ್ಲ, ಅಗತ್ಯವೂ ಆಗಿದೆ. ಆಧುನೀಕರಣವೇ ನಮ್ಮ ಸೇನಾಪಡೆಗಳ ಹೆಗ್ಗುರುತಾಗಬೇಕು. ಇದನ್ನು ಮನಗಂಡು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ದಶಕಗಳಿಂದ ಪರಿಹಾರ ಕಾಣದೆ ಉಳಿದಿದ್ದ ಒಂದು ಹುದ್ದೆ ಒಂದು ಪಿಂಚಣಿ (ಒಆರ್ಒಪಿ) ಸಮಸ್ಯೆಯನ್ನು ನಾವು ಬಗೆಹರಿಸಿದೆವು, ಹುತಾತ್ಮರಾದವರ ಮಕ್ಕಳಿಗೆ ನೀಡುವ ವಿದ್ಯಾರ್ಥಿವೇತನವನ್ನು ಹೆಚ್ಚಿಸುವ ತೀರ್ಮಾನವನ್ನೂ ಮಾಡಲಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.