ನವದೆಹಲಿ: ’ಸ್ವಚ್ಛ ಭಾರತ ಮಿಷನ್ ಗ್ರಾಮೀಣ್ ಅಡಿಯಲ್ಲಿ ದೇಶವು ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಮಿಷನ್ನ ಎರಡನೇ ಹಂತದ ಯೋಜನೆಯಲ್ಲಿ ದೇಶದ ಶೇ 50ರಷ್ಟು ಹಳ್ಳಿಗಳು ಬಯಲು ಬಹಿರ್ದೆಸೆ ಮುಕ್ತ (ಒಡಿಎಫ್) ಸ್ಥಾನಮಾನ ಪಡೆದಿವೆ’ ಎಂದು ಕೇಂದ್ರ ಜಲಶಕ್ತಿ ಸಚಿವಾಲಯ ಪ್ರಕಟಿಸಿದೆ.
ಈ ಗ್ರಾಮಗಳು ಘನ ಅಥವಾ ದ್ರವ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿವೆ. ಇಲ್ಲಿಯವರೆಗೆ 2.96 ಲಕ್ಷ ಹಳ್ಳಿಗಳು ಬಯಲು ಬಹಿರ್ದಸೆ ಮುಕ್ತ ಪ್ಲಸ್ ಎಂದು ಘೋಷಿಸಿಕೊಂಡಿವೆ. ಇದು 2024–25ರ ವೇಳೆಗೆ ಸ್ವಚ್ಛ ಭಾರತ ಮಿಷನ್ ಗ್ರಾಮೀಣ್ ಎರಡನೇ ಹಂತದ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಎಂದು ಸಚಿವಾಲಯ ಹೇಳಿಕೊಂಡಿದೆ.
ಒಡಿಎಫ್ ಪ್ಲಸ್ ಗ್ರಾಮಗಳ ಶೇಕಡಾವಾರು ಪ್ರಮಾಣದಲ್ಲಿ ತೆಲಂಗಾಣ (ಶೇ 100), ಕರ್ನಾಟಕ (ಶೇ 99.5), ತಮಿಳುನಾಡು (ಶೇ 97.8) ಮತ್ತು ಉತ್ತರ ಪ್ರದೇಶ (ಶೇ 95.2) ಉನ್ನತ ಸಾಧನೆ ಮಾಡಿವೆ ಎಂದು ಸಚಿವಾಲಯ ತಿಳಿಸಿದೆ.
ಸ್ವಚ್ಛ ಭಾರತ ಮಿಷನ್ ಗ್ರಾಮೀಣ್ ಯೋಜನೆಗೆ ಕೇಂದ್ರ ಸರ್ಕಾರವು 2014–15 ಹಾಗೂ 2021–22 ರ ಅವಧಿಯಲ್ಲಿ ₹83,938 ಕೋಟಿ ಹಂಚಿಕೆ ಮಾಡಿತ್ತು. 2023–24ನೇ ಸಾಲಿಗೆ ₹52,138 ಕೋಟಿ ಮೀಸಲಿಡಲಾಗಿದೆ. ಜತೆಗೆ, 15ನೇ ಹಣಕಾಸು ಆಯೋಗವು ನೈರ್ಮಲೀಕರಣಕ್ಕೆ ಅನುದಾನ ಹಂಚಿಕೆ ಮಾಡಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.