ADVERTISEMENT

ತಮಿಳುನಾಡಲ್ಲಿ ಮಗು ಚಿವುಟಿ, ಕರ್ನಾಟಕದಲ್ಲಿ ತೊಟ್ಟಿಲು ತೂಗುವ ಕಾಂಗ್ರೆಸ್‌: ಕಟೀಲ್

​ಪ್ರಜಾವಾಣಿ ವಾರ್ತೆ
Published 9 ಜನವರಿ 2022, 10:36 IST
Last Updated 9 ಜನವರಿ 2022, 10:36 IST
ನಳಿನ್‌ ಕುಮಾರ್‌ ಕಟೀಲ್‌
ನಳಿನ್‌ ಕುಮಾರ್‌ ಕಟೀಲ್‌   

ಬೆಂಗಳೂರು: ಮೇಕೆದಾಟು ಅಣೆಕಟ್ಟು ನಿರ್ಮಾಣ ವಿಚಾರದಲ್ಲಿ ತಮಿಳುನಾಡಿನಲ್ಲಿ ಮಗು ಚಿವುಟುವ ಕಾಂಗ್ರೆಸ್‌, ಕರ್ನಾಟಕದಲ್ಲಿ ತೊಟ್ಟಿಲು ತೂಗುತ್ತದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

ಈ ಬಗ್ಗೆ ಭಾನುವಾರ ಟ್ವೀಟ್‌ ಮಾಡಿರುವ ಅವರು, ‘ನಮ್ಮ ನೀರು ನಮ್ಮ ಹಕ್ಕು ಎನ್ನುವ ಬದ್ಧತೆ ನಮ್ಮದು. ಈ ಯೋಜನೆ ಅನುಷ್ಠಾನಗೊಳಿಸಲು ಡಿ.ಕೆ ಶಿವಕುಮಾರ್‌ ಅವರ ಗೆಳೆಯ ಎಂ.ಕೆ ಸ್ಟಾಲಿನ್‌ ಅಡ್ಡಗಾಲು ಹಾಕಿದ್ದಾರೆ. ತಮಿಳುನಾಡಿನಲ್ಲಿ ಮಗುವನ್ನು ಚಿವುಟಿ ಕರ್ನಾಟದಲ್ಲಿ ತೊಟ್ಟಿಲು ತೂಗುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಇದು ಜನರಿಗೆ ತಿಳಿಯಲ್ಲ ಎನ್ನುವ ಭ್ರಮೆಯಲ್ಲಿದ್ದಾರೆ,’ ಎಂದು ಟೀಕಿಸಿದ್ದಾರೆ.

‘ಮೇಕೆದಾಟು ಯೋಜನೆಗೆ ಕರ್ನಾಟಕದ ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆದರೆ ಡಿ.ಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರ ನಡುವಿನ ರಾಜಕೀಯ ಪ್ರತಿಷ್ಟೆಯ ಮೇಲಾಟದಲ್ಲಿ ಪಾದಯಾತ್ರೆಯ ಕ್ರೆಡಿಟ್ ತೆಗೆದುಕೊಳ್ಳಲು ಸ್ಪರ್ಧೆ ಬಿಟ್ಟರೆ ಬೇರೆನೂ ಇಲ್ಲ,’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ಅಧಿಕಾರದಲ್ಲಿದ್ದಾಗ ಯೋಜನೆಯನ್ನು ಕಾಂಗ್ರೆಸ್‌ ಮರೆತಿತ್ತು. ಈ ಯೋಜನೆ ಬಗ್ಗೆ ಈಗ ಬಿಜೆಪಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ನೀವು‌ ಮಲಗಿ ಎಂದೂ ಕಾಂಗ್ರೆಸ್‌ ನಾಯಕರನ್ನು ಗೇಲಿ ಮಾಡಿದ್ದಾರೆ.

ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಕೆದಾಟು ವಿಷಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ವಿಚಾರಣೆಯಲ್ಲಿದೆ. ತಾವು ವಕೀಲರೆಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರೇ, ಯಾವುದೇ ಪ್ರಕರಣ ನ್ಯಾಯಾಲಯದಲ್ಲಿ ಇರುವಾಗ ಏನು ಮಾಡಬೇಕು ಎಂದು ಜನರಿಗೆ ತಿಳಿಸುವಿರಾ ಅಥವಾ ಪಾದಯಾತ್ರೆ ಮಾಡಿ ಮೈಲೇಜ್ ಪಡೆಯಲು ಕೆಪಿಸಿಸಿ ಅಧ್ಯಕ್ಷರೊಂದಿಗೆ ಜೊತೆ ಸ್ಪರ್ಧೆಗೆ ಬೀಳುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.