ADVERTISEMENT

ಯಾರದೋ ತೃಷೆ ತಣಿಸಲು ನಡೆಸಿದ ಪ್ರಹಸನ: ಚಿದಂಬರಂ ಬಂಧನಕ್ಕೆ ಪುತ್ರ ಕಾರ್ತಿ ಆಕ್ರೋಶ

ನ್ಯಾಯಾಲಯದಲ್ಲಿ ಹೋರಾಡಿ ಗೆಲ್ಲುವ ವಿಶ್ವಾಸ

ಪಿಟಿಐ
Published 21 ಆಗಸ್ಟ್ 2019, 20:20 IST
Last Updated 21 ಆಗಸ್ಟ್ 2019, 20:20 IST
ಚಿದಂಬರಂ ಅವರನ್ನು ಸಿಬಿಐ ಅಧಿಕಾರಿಗಳು ಕರೆದೊಯ್ಯುತ್ತಿದ್ದ ವಾಹನವನ್ನು ತಡೆದು ಚಿದಂಬರಂ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು –ರಾಯಿಟರ್ಸ್ ಚಿತ್ರ
ಚಿದಂಬರಂ ಅವರನ್ನು ಸಿಬಿಐ ಅಧಿಕಾರಿಗಳು ಕರೆದೊಯ್ಯುತ್ತಿದ್ದ ವಾಹನವನ್ನು ತಡೆದು ಚಿದಂಬರಂ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು –ರಾಯಿಟರ್ಸ್ ಚಿತ್ರ   

ಚೆನ್ನೈ: ‘ಯಾರದೋ ತೃಷೆಯನ್ನು ತಣಿಸುವ ಸಲುವಾಗಿ ತನಿಖಾ ಸಂಸ್ಥೆಗಳು ಈ ನಾಟಕ ಮತ್ತು ಪ್ರಹಸನ ನಡೆಸಿವೆ. ಇದು ದ್ವೇಷ ರಾಜಕಾರಣ’ ಎಂದು ಪಿ.ಚಿದಂಬರಂ ಅವರ ಮಗ ಕಾರ್ತಿ ಚಿದಂಬರಂ ಅವರು ಕಿಡಿ ಕಾರಿದ್ದಾರೆ.

ಚಿದಂಬರಂ ಅವರ ಬಂಧನದ ನಂತರ ತಮ್ಮ ಮನೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಕಾರ್ತಿ ಮಾತನಾಡಿದ್ದಾರೆ. ಐಎನ್‌ಎಕ್ಸ್‌ ಮೀಡಿಯಾ ಅಕ್ರಮ ವಿದೇಶಿ ದೇಣಿಗೆ ಪ್ರಕರಣದಲ್ಲಿ ಕಾರ್ತಿ ಸಹ ಆರೋಪಿ. ಈಗ ಅವರು ಜಾಮೀನಿನ ಮೇಲೆ ಹೊರಗೆ ಇದ್ದಾರೆ.

‘ಐಎನ್ಸ್‌ಎಕ್ಸ್‌ ಘಟನೆ ನಡೆದದ್ದು 2008ರಲ್ಲಿ. ಇದಕ್ಕೆ ಸಂಬಂಧಿಸಿದಂತೆ ಸಿಬಿಐ ಎಫ್‌ಐಆರ್ ದಾಖಲಿಸಿದ್ದೇ 2017ರಲ್ಲಿ. ಈಗಲೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಆರೋಪಪಟ್ಟಿಯನ್ನು ಸಿದ್ಧಪಡಿಸಿಲ್ಲ. ಐಎನ್‌ಎಕ್ಸ್‌ ವಿದೇಶಿ ದೇಣಿಗೆ ವಿಚಾರದಲ್ಲಿ ಹಗರಣವೇ ನಡೆದಿಲ್ಲ ಎಂಬುದನ್ನು ಇದು ಸೂಚಿಸುತ್ತದೆ’ ಎಂದು ಕಾರ್ತಿ ಆರೋಪಿಸಿದ್ದಾರೆ.

ADVERTISEMENT

‘ತನಿಖಾ ಸಂಸ್ಥೆಗಳು ನಾಲ್ಕು ಭಾರಿ ಶೋಧಕಾರ್ಯ ನಡೆಸಿವೆ. 20 ಸಮನ್ಸ್‌ಗಳನ್ನು ನೀಡಿವೆ. 11 ದಿನ ನನ್ನನ್ನು ವಶದಲ್ಲಿರಿಸಿಕೊಂಡಿದ್ದವು. ಆದರೂ ಆರೋಪಪಟ್ಟಿ ಸಿದ್ಧಪಡಿಸಿಲ್ಲ. ಪ್ರಕರಣ ಅಷ್ಟು ಗುರುತರವಾಗಿದ್ದಿದ್ದರೆ ಆರೋಪಪಟ್ಟಿ ಇರಬೇಕಿತ್ತಲ್ಲವೇ’ ಎಂದು ಅವರು ಪ್ರಶ್ನಿಸಿದ್ದಾರೆ.

‘ನನ್ನ ತಂದೆ ತಲೆಮರೆಸಿಕೊಂಡಿರಲಿಲ್ಲ. ನನ್ನ ತಂದೆಗೆ ಸಮನ್ಸ್ ನೀಡಿದಾಗಲೆಲ್ಲಾ ಅವರು ತನಿಖಾ ಸಂಸ್ಥೆಗಳ ಮುಂದೆ ಹಾಜರಾಗಿ, ತನಿಖೆ ಎದುರಿಸಿದ್ದಾರೆ. ಈವರೆಗೆ ಸಿಬಿಐ ಒಮ್ಮೆ ಮಾತ್ರ ಅವರಿಗೆ ಸಮನ್ಸ್ ನೀಡಿತ್ತು. ಜಾರಿ ನಿರ್ದೇಶನಾಲಯವು ಹಲವು ಬಾರಿ ಸಮನ್ಸ್ ನೀಡಿತ್ತು. ಪ್ರತಿ ಬಾರಿಯೂ ಅವರು ವಿಚಾರಣೆಗೆ ಹಾಜರಾಗಿದ್ದಾರೆ. ಇದೆಲ್ಲವನ್ನೂ ನಾವು ನ್ಯಾಯಾಲಯದಲ್ಲಿ ಎದುರಿಸುತ್ತೇವೆ’ ಎಂದು ಕಾರ್ತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

* ಇವನ್ನು ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.