
ಸುಪ್ರೀಂಕೋರ್ಟ್ ಹಾಗೂ ವಿಜಯ್
– ಪಿಟಿಐ ಚಿತ್ರಗಳು
ನವದೆಹಲಿ: ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಧ್ಯಕ್ಷ, ನಟ ವಿಜಯ್ ಅವರ ರ್ಯಾಲಿ ವೇಳೆ ಕರೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ.
ನ್ಯಾಯಮೂರ್ತಿಗಳಾದ ಜೆ.ಕೆ ಮಾಹೇಶ್ವರಿ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠವು, ಸಿಬಿಐ ತನಿಖೆಯ ಮೇಲ್ವಿಚಾರಣೆಗೆ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಅಜಯ್ ರಸ್ತೋಗಿ ನೇತೃತ್ವದ ಸಮಿತಿಯನ್ನೂ ನೇಮಿಸಿದೆ.
ವಿಜಯ್ ಅವರು ಸೆಪ್ಟೆಂಬರ್ 27ರಂದು ಕರೂರಿನಲ್ಲಿ ರ್ಯಾಲಿ ನಡೆಸಿದ್ದ ವೇಳೆ ಕಾಲ್ತುಳಿತ ಸಂಭವಿಸಿತ್ತು. ಕಾಲ್ತುಳಿತದಲ್ಲಿ 41 ಮಂದಿ ಮೃತಪಟ್ಟಿದ್ದರು.
ಎಸ್ಐಟಿ ರಚನೆಗೆ ಮದ್ರಾಸ್ ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ಟಿವಿಕೆ ಪಕ್ಷ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 10ರಂದು ನಡೆಸಿದ್ದ ಪೀಠ, ಆದೇಶವನ್ನು ಕಾಯ್ದಿರಿಸಿತ್ತು.
ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳನ್ನು ವಿಚಾರಣೆಗೆ ಪರಿಗಣಿಸಿದ್ದಕ್ಕೆ ಮತ್ತು ಎಸ್ಐಟಿ ತನಿಖೆಗೆ ಆದೇಶಿಸಿದ್ದಕ್ಕಾಗಿ ಮದ್ರಾಸ್ ಹೈಕೋರ್ಟ್ನ ನ್ಯಾಯಮೂರ್ತಿ ಎನ್.ಸೆಂಥಿಲ್ಕುಮಾರ್ ಅವರನ್ನು ಪೀಠವು ತರಾಟೆಗೆ ತೆಗೆದುಕೊಂಡಿತು.
‘ಪ್ರಕರಣದ ತನಿಖೆಗೆ ಕೋರಿ ಸಲ್ಲಿಸಿರುವ ಅರ್ಜಿಗಳು ಮದುರೈ ಪೀಠದ ಮುಂದೆ ಬಾಕಿ ಇರುವಾಗ ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರ ಆದೇಶವಿಲ್ಲದೆಯೇ ಅರ್ಜಿಗಳನ್ನು ಪುರಸ್ಕರಿಸಲು ಸೆಂಥಿಲ್ಕುಮಾರ್ ಅವರಿಗೆ ಯಾವುದೇ ಅವಕಾಶವಿರಲಿಲ್ಲ’ ಎಂದು ಹೇಳಿತು.
ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ತನಿಖೆ ನಡೆಸಬೇಕೆಂದು ಟಿವಿಕೆ ಆಗ್ರಹಿಸಿತ್ತು. ‘ಎಸ್ಐಟಿಯಲ್ಲಿ ತಮಿಳುನಾಡಿನ ಪೊಲೀಸ್ ಅಧಿಕಾರಿಗಳು ಮಾತ್ರ ಇದ್ದಾರೆ. ಅವರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ’ ಎಂದು ಹೇಳಿತ್ತು.
‘ತಪ್ಪು ಮಾಹಿತಿ ನೀಡಲಾಗಿದೆ’
ಚೆನ್ನೈ: ಕಾಲ್ತುಳಿತ ಬಗ್ಗೆ ಸಿಬಿಐ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸುವಾಗ ತಮಗೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ಎರಡು ಸಂತ್ರಸ್ತ ಕುಟುಂಬಗಳು ಆರೋಪಿಸಿವೆ.
‘ಕುಟುಂಬದ ಸದಸ್ಯರಿಗೆ ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡುವುದಕ್ಕೆ ಸಂಬಂಧಿಸಿದ ಅರ್ಜಿ ಎಂದು ಭಾವಿಸಿ ಸಹಿ ಹಾಕಿದ್ದೇವೆ. ಅದು ಸಿಬಿಐ ತನಿಖೆ ಕೋರಿರುವ ಅರ್ಜಿ ಎಂಬ ಮಾಹಿತಿ ಇರಲಿಲ್ಲ’ ಎಂದು ಹೇಳಿವೆ.
‘ನಮ್ಮ ಪರವಾಗಿ ಸಿಬಿಐ ತನಿಖೆಗೆ ಕೋರಲಾಗಿದೆ ಎಂಬುದು ತಿಳಿದಿರಲಿಲ್ಲ. ಅರ್ಜಿಗೆ ಸಹಿ ಹಾಕಿರುವ ನನ್ನ ಪತಿ ಪನ್ನೀರಸೆಲ್ವಂ ಅವರು ನಮ್ಮನ್ನು ತೊರೆದು 9 ವರ್ಷಗಳಾಗಿವೆ’ ಎಂದು ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡ 9 ವರ್ಷದ ಬಾಲಕನ ತಾಯಿ ಶರ್ಮಿಳಾ ಹೇಳಿದ್ದಾರೆ.
‘ಪರಿಹಾರ ಮತ್ತು ಮಗನಿಗೆ ಉದ್ಯೋಗ ಸಿಗುತ್ತದೆ ಎಂಬ ಆಶಯದೊಂದಿಗೆ ಕೆಲವು ಕಾಗದಪತ್ರಗಳಿಗೆ ಸಹಿ ಹಾಕಿದ್ದೇನೆ’ ಎಂದು ದುರ್ಘಟನೆಯಲ್ಲಿ ಪತ್ನಿಯನ್ನು ಕಳೆದುಕೊಂಡಿರುವ ದಿನಗೂಲಿ ನೌಕರ ಪಿ.ಸೆಲ್ವರಾಜ್ ಹೇಳಿದ್ದಾರೆ.
ಆದೇಶ ರದ್ದುಗೊಳಿಸಲೂಬಹುದು: ಡಿಎಂಕೆ
ಕರೂರ್ ಕಾಲ್ತುಳಿತ ಘಟನೆಯ ತನಿಖೆಯನ್ನು ಸಿಬಿಐಗೆ ವಹಿಸಿ ತಾನು ನೀಡಿರುವ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸುವ ಸಾಧ್ಯತೆಗಳಿವೆ ಎಂದು ಡಿಎಂಕೆ ಸೋಮವಾರ ಹೇಳಿದೆ.
‘ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ತಮ್ಮ ಹೆಸರುಗಳನ್ನು ಸೇರಿಸಿದ್ದು ಅರಿವಿಗೆ ಬಂದಿಲ್ಲ ಎಂದು ಇಬ್ಬರು ವ್ಯಕ್ತಿಗಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ’ ಎಂದು ತಮಿಳುನಾಡು ಸರ್ಕಾರವನ್ನು ಪ್ರತಿನಿಧಿಸಿದ ಡಿಎಂಕೆ ರಾಜ್ಯಸಭಾ ಸದಸ್ಯ ಮತ್ತು ವಕೀಲ ಪಿ. ವಿಲ್ಸನ್ ತಿಳಿಸಿದರು.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಅರ್ಜಿಗಳನ್ನು ಮೋಸದಿಂದ ಸಲ್ಲಿಸಲಾಗಿದೆ ಎಂಬುದು ಸಾಬೀತಾದರೆ ಸುಪ್ರೀಂ ಕೋರ್ಟ್ ತನ್ನ ಆದೇಶವನ್ನು ರದ್ದುಗೊಳಿಸುವ ಸಾಧ್ಯತೆಯಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.