ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ವಕೀಲರ ಸಂಘವು (ಜೆಕೆಎಚ್ಸಿಬಿಎ) ಮಂಗಳವಾರ ಚುನಾವಣೆ ಮುಂದೂಡಿದೆ.
ರಾಜ್ಯದಲ್ಲಿ ಶಾಂತಿ ಕದಡಿದ ಆರೋಪದಡಿ ಹೋದ ವರ್ಷದ ಆಗಸ್ಟ್ನಲ್ಲಿ ಸಂಘದ ಅಧ್ಯಕ್ಷ ಮಿಯಾ ಅಬ್ದುಲ್ ಖಯ್ಯೂಂ ಅವರನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿತ್ತು. ನಂತರ ಕೋವಿಡ್ ಬಿಕ್ಕಟ್ಟು ಸೃಷ್ಟಿಯಾಗಿದ್ದರಿಂದ ಸಂಘದ ಚುನಾವಣೆಯು ತಡವಾಗಿತ್ತು.
ಚುನಾವಣೆ ನಡೆಸಲು ಅನುಮತಿ ನೀಡುವಂತೆ ಸಂಘವು ಶ್ರೀನಗರದ ಆಡಳಿತಕ್ಕೆ ಮನವಿ ಮಾಡಿತ್ತು.
‘ಜಮ್ಮ ಮತ್ತು ಕಾಶ್ಮೀರದ ವಿಷಯದಲ್ಲಿ ಸಂಘದ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸದ ಹೊರತು ಚುನಾವಣೆ ನಡೆಸಲು ಅನುಮತಿ ಕೊಡಲಾಗುವುದಿಲ್ಲ’ ಎಂದು ಶ್ರೀನಗರದ ಜಿಲ್ಲಾಧಿಕಾರಿ ಶಾಹೀದ್ ಚೌಧರಿ ಸೋಮವಾರ ತಿಳಿಸಿದ್ದರು.
‘ಮಂಗಳವಾರ ನಿಗದಿಯಾಗಿದ್ದ ಚುನಾವಣೆಯನ್ನು ಮುಂದಕ್ಕೆ ಹಾಕಲು ತೀರ್ಮಾನಿಸಿದ್ದೇವೆ. ಹೊಸ ದಿನಾಂಕವನ್ನು ಶೀಘ್ರವೇ ಪ್ರಕಟಿಸುತ್ತೇವೆ’ ಎಂದು ಸಂಘದ ಚುನಾವಣಾ ಆಯುಕ್ತ ಹಾಗೂ ವಕೀಲ ಮುದಾಸಿರ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.