ನವದೆಹಲಿ: ಸಂಸತ್ತಿನ ಉಭಯ ಸದನಗಳಲ್ಲಿ ಪೌರತ್ವ(ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿದ್ದನ್ನು ಕಾಶ್ಮೀರಿ ವಲಸೆ ಪಂಡಿತರ ಸಂಘಟನೆಯಾದ ಪನುನ್ ಕಾಶ್ಮೀರ್ ಸ್ವಾಗತಿಸಿದೆ. ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಇಡೀ ದೇಶವೇ ತುಂಬುಹೃದಯದಿಂದ ನಿಂತಿದೆ ಎಂದು ಹೇಳಿದ್ದಾರೆ.
ಸಂಘಟನೆಯ ಸಂಚಾಲಕ ಅಗ್ನಿಶೇಖರ್ ಸುದ್ದಿಗಾರರೊಂದಿಗೆ ಮಾತನಾಡಿ, ಪೌರತ್ವ ತಿದ್ದುಪಡಿ ಮಸೂದೆಯನ್ನು ಸಂಸತ್ತು ಅಂಗೀಕರಿಸಿರುವುದು ಭಾರತದ ಸಂಪೂರ್ಣ ರಾಜಕೀಯ-ಸಾಂಸ್ಕೃತಿಕ ವಸಾಹತುಶಾಹಿಯನ್ನು ನಿವಾರಿಸುವ ಭರವಸೆಯಾಗಿದೆ. ರಾಷ್ಟ್ರೀಯ ಏಕೀಕರಣಕ್ಕಾಗಿ ಭಾರತೀಯ ಮನಸ್ಸನ್ನು ವಸಾಹತುಶಾಹಿಯಿಂದ ಮುಕ್ತಗೊಳಿಸುವುದು ನಿರ್ಣಾಯಕ ಅಗತ್ಯವಾಗಿದೆ ಎಂದು ತಿಳಿಸಿದರು
ಸಂಘಟನೆಯ ಅಧ್ಯಕ್ಷ ಅಜಯ್ ಚ್ರುಂಗೂ ಸೇರಿದಂತೆ ಇತರೆ ಹಲವಾರು ನಾಯಕರೊಂದಿಗಿದ್ದ ಅಗ್ನಿಶೇಖರ್, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದ ಧಾರ್ಮಿಕ ದೌರ್ಜನ್ಯಕ್ಕೊಳಗಾದ ಹಿಂದೂಗಳಿಗೆ ಭಾರತದ ಪೌರತ್ವ ನೀಡುವ ನಿರ್ಧಾರವು ವಸಾಹತುಶಾಹಿ ಗುಲಾಮಗಿರಿಯ ವೇಳೆಯಲ್ಲಿ ಹಿಂದೂಗಳ ಮೇಲೆ ಉಂಟಾದ ಹಾನಿಯನ್ನು ಪರಿಹರಿಸಲು ಮೋದಿ ಸರ್ಕಾರದ ಮಹತ್ವದ ನಿರ್ಧಾರವಾಗಿದೆ ಎಂದು ಹೇಳಿದರು.
ಸ್ವಾತಂತ್ರ್ಯ ನಂತರ ಭಾರತವು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿ ಉಳಿದಿರುವ ಹಿಂದೂಗಳ ಮೇಲೆ ಹೆಚ್ಚಿನ ಜನಾಂಗೀಯ ಹತ್ಯೆಗೆ ಮೂಕ ಪ್ರೇಕ್ಷಕರಾಗಿ ಉಳಿಯಲು ನಿರ್ಧರಿಸಿತು ಎಂದು ಅವರು ಆರೋಪಿಸಿದರು.
ಭಾರತವು ದೀರ್ಘಕಾಲದವರೆಗೆ ದೇಶದ ಐತಿಹಾಸಿಕ ಮತ್ತು ನಾಗರಿಕ ಜವಾಬ್ದಾರಿಗಳ ಬಗ್ಗೆ ತಟಸ್ಥ ಅಥವಾ ಪ್ರತಿಕೂಲ ಘಟಕವಾಗಿ ಕಾರ್ಯನಿರ್ವಹಿಸುತ್ತಿದೆ. ಕಾಂಗ್ರೆಸ್ ಆಡಳಿತಾವಧಿಯು ಭಾರತವನ್ನು ದೇಶದ ಐತಿಹಾಸಿಕ ಮತ್ತು ನಾಗರಿಕ ಗುರುತಿನ ಮೇಲೆ ಯುದ್ಧ ಮಾಡುವ ಸಾಧನವನ್ನಾಗಿ ಪರಿವರ್ತಿಸಿದೆ ಎಂದು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.