ನವದೆಹಲಿ: ತೀವ್ರ ರಾಜಕೀಯ ವಾಗ್ವಾದಗಳಿಗೆ ಕಾರಣವಾಗಿರುವ ದೆಹಲಿ ಅಬಕಾರಿ ನೀತಿ ವಿಚಾರವೀಗ ಮತ್ತೊಂದು ತಿರುವು ಪಡೆದುಕೊಂಡಿದೆ.
ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರನ್ನು ಅಬಕಾರಿ ನೀತಿ ವಿವಾದದಲ್ಲಿ ಎಳೆದು ತರುವ ಪ್ರಯತ್ನವನ್ನು ಬಿಜೆಪಿ ಮಾಡಿದೆ.
ದೆಹಲಿ ಅಬಕಾರಿ ನೀತಿ ನಿರೂಪಣೆ ಸಭೆಗಳಲ್ಲಿ ಕೆಸಿಆರ್ ಕುಟುಂಬ ಸದಸ್ಯರು ಭಾಗಿಯಾಗಿದ್ದರೆಂಬ ಸ್ಫೋಟಕ ಹೇಳಿಕೆಯನ್ನು ಬಿಜೆಪಿ ಸಂಸದ ಪರ್ವೇಶ್ ವರ್ಮಾ ನೀಡಿದ್ದಾರೆ.
ತೆಲಂಗಾಣವು ‘ಇದೇ ರೀತಿಯ’ ಅಬಕಾರಿ ನೀತಿಯನ್ನು ಹೊಂದಿದೆ ಮತ್ತು ಇದನ್ನು ಪಶ್ಚಿಮ ಬಂಗಾಳದಲ್ಲಿಯೂ ಜಾರಿಗೊಳಿಸಲಾಗಿದೆ ಎಂದು ವರ್ಮಾ ಹೇಳಿದ್ದಾರೆ.
‘ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ಅವರ ಕುಟುಂಬ ಸದಸ್ಯರು ದೆಹಲಿ ಅಬಕಾರಿ ನೀತಿ ರೂಪಿಸುವ ಸಭೆಗಳಲ್ಲಿ ಭಾಗವಹಿಸಿದ್ದರು. ಮನೀಶ್ ಸಿಸೋಡಿಯಾ ಮತ್ತು ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ನಡೆದಿದ್ದ ಸಭೆಗಳಲ್ಲಿ ಕೆಸಿಆರ್ ಕುಟುಂಬ ಸದಸ್ಯರು ಭಾಗಿಯಾಗಿದ್ದರು. ಅವರ ಸಹಾಯದೊಂದಿಗೆ ದೆಹಲಿ ಅಬಕಾರಿ ನೀತಿಯನ್ನು ಸಿದ್ಧಪಡಿಸಲಾಗಿದೆ’ ಎಂದು ವರ್ಮಾ ಆರೋಪಿಸಿದ್ದಾರೆ.
ಅಬಕಾರಿ ನೀತಿ ಪ್ರಕರಣದ ಸಂಬಂಧ ಸಿಸೋಡಿಯಾ ಸೇರಿದಂತೆ ಸಿಬಿಐನ ಎಫ್ಐಆರ್ನಲ್ಲಿ ಹೆಸರಿಸಲಾಗಿರುವ 13 ಮಂದಿಗೆ ಎಲ್ಒಸಿ ಜಾರಿ ಮಾಡಲಾಗಿದೆ ಎಂದು ವರದಿಯಾಗಿತ್ತು.
ಇದನ್ನು ಅಲ್ಲಗಳೆದಿರುವ ಸಿಬಿಐ, ‘ಸಿಸೋಡಿಯಾ ಸಾರ್ವಜನಿಕ ವ್ಯಕ್ತಿ. ಅವರಿಗೆ ಎಲ್ಒಸಿ ಜಾರಿ ಮಾಡುವ ಬಗ್ಗೆ ಯೋಚಿಸಿಯೇ ಇಲ್ಲ‘ ಎಂದು ಸ್ಪಷ್ಟಪಡಿಸಿದೆ.
ಇವುಗಳನ್ನೂ ಓದಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.