ನವದೆಹಲಿ: ‘ದೆಹಲಿಯ ಮುಸ್ಲಿಮರು ಸಮಗ್ರವಾಗಿ ಕಾಂಗ್ರೆಸ್ಗೆ ಮತ ಹಾಕಿದ್ದಾರೆ’ ಎಂದು ದೆಹಲಿ ಮುಖ್ಯಮಂತ್ರಿ, ಎಎಪಿ ಮುಖಂಡ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ತನ್ಮೂಲಕ ದೆಹಲಿಯಲ್ಲಿ ತಮ್ಮ ಪಕ್ಷ ದೊಡ್ಡ ಸಾಧನೆಯನ್ನೇನೂ ಮಾಡಿಲ್ಲ ಎಂಬ ಸೂಚನೆಯನ್ನು ನೀಡಿದ್ದಾರೆ.
ಪಂಜಾಬ್ನಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯ ಪರ ಪ್ರಚಾರದಲ್ಲಿ ತೊಡಗಿದ್ದ ಅವರು, ಮಾಧ್ಯಮಪ್ರತಿನಿಧಿ ಜೊತೆ ಮಾತನಾಡುತ್ತ, ‘ಮತದಾನಕ್ಕೂ 48 ಗಂಟೆ ಮುಂಚಿನವರೆಗೂ ದೆಹಲಿಯ ಏಳು ಕ್ಷೇತ್ರಗಳಲ್ಲೂ ಎಎಪಿ ಗೆಲ್ಲಬಹುದು ಎಂಬ ಸ್ಥಿತಿ ಇತ್ತು. ಆದರೆ ಕೊನೆಯ ಕ್ಷಣದಲ್ಲಿ ಚಿತ್ರಣ ಬದಲಾಗಿ ಮುಸ್ಲಿಮರೆಲ್ಲರೂ ಕಾಂಗ್ರೆಸ್ನತ್ತ ವಾಲಿದರು. ಈ ಬದಲಾವಣೆಗೆ ಕಾರಣವೇನು ಎಂದು ತಿಳಿಯುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ’ ಎಂದರು.
ಕೇಜ್ರಿವಾಲ್ ಅವರ ಈ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್, ‘ಅವರು (ಕೇಜ್ರಿವಾಲ್) ಏನು ಹೇಳಲು ಪ್ರಯತ್ನಿಸುತ್ತಿದ್ದಾರೆ ಎಂಬದೇ ಅರ್ಥವಾಗುತ್ತಿಲ್ಲ. ತಾನು ಬಯಸಿದ ಪಕ್ಷಕ್ಕೆ ಅಥವಾ ವ್ಯಕ್ತಿಗೆ ಮತಹಾಕುವ ಅಧಿಕಾರ ಪ್ರತಿಯೊಬ್ಬರಿಗೂ ಇದೆ. ಕೇಜ್ರಿವಾಲ್ ಅವರ ಆಡಳಿತ ಜನರಿಗೆ ಇಷ್ಟವಾಗಿಲ್ಲಮತ್ತು ಅವರ ಆಡಳಿತ ಶೈಲಿ ಏನೆಂಬುದೇ ಜನರಿಗೆ ಅರ್ಥವಾಗಿಲ್ಲ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.