ನವದೆಹಲಿ: ಕೊರೊನಾ ವೈರಸ್ನಿಂದಾಗಿ ಎಲ್ಲ ಜನರು ತೊಂದರೆ ಅನುಭವಿಸುತ್ತಿದ್ದು, ಕೋವಿಡ್-19 ಲಸಿಕೆ ದೇಶದಾದ್ಯಂತ ಉಚಿತವಾಗಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಹೇಳಿದ್ದಾರೆ.
ಕೋವಿಡ್-19 ಲಸಿಕೆ ಇನ್ನೂ ಸಿದ್ಧವಾಗದಿದ್ದರೂ ಕೂಡ ಅಧಿಕಾರಕ್ಕೆ ಬಂದರೆ ಉಚಿತವಾಗಿ ಲಸಿಕೆಯನ್ನು ವಿತರಿಸಲಾಗುವುದು ಎಂದು ಬಿಜೆಪಿ, ಬಿಹಾರ ವಿಧಾನಸಭಾ ಪ್ರಣಾಳಿಕೆಯಲ್ಲಿ ಪ್ರಕಟಿಸಿದ ಬಳಿಕ ಬಿಹಾರದ ಜನರಿಗೆ ಮಾತ್ರ ಉಚಿತವಾಗಿ ಲಸಿಕೆ ಲಭ್ಯವಾಗಬೇಕೇ ಎನ್ನುವ ಕುರಿತಾದ ಚರ್ಚೆಗಳು ಆರಂಭವಾಗಿವೆ.
ಈಶಾನ್ಯ ದೆಹಲಿಯಲ್ಲಿ ಎರಡು ಮೇಲು ಸೇತುವೆ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಇಡೀ ದೇಶವೇ ಉಚಿತವಾಗಿ ಕೋವಿಡ್-19 ಲಸಿಕೆ ಪಡೆಯಬೇಕು. ಇದು ಇಡೀ ದೇಶದ ಹಕ್ಕು. ಕೊರೊನಾ ವೈರಸ್ ಸೋಂಕಿನಿಂದಾಗಿ ಎಲ್ಲ ಜನರು ಸಮಸ್ಯೆಗೆ ಸಿಲುಕಿದ್ದಾರೆ. ಹಾಗಾಗಿ ಲಸಿಕೆಯು ದೇಶದ ಪ್ರತಿಯೊಬ್ಬರಿಗೂ ಲಭ್ಯವಾಗಬೇಕು ಎಂದು ತಿಳಿಸಿದ್ದಾರೆ.
ಕೊರೊನಾ ವೈರಸ್ ಲಸಿಕೆ ಒಮ್ಮೆ ಲಭ್ಯವಾದರೆ, ವಿಶೇಷ ಕೋವಿಡ್-19 ರೋಗನಿರೋಧಕ ಕಾರ್ಯಕ್ರಮದಡಿಯಲ್ಲಿ ಕೇಂದ್ರವು ನೇರವಾಗಿ ಔಷಧಗಳನ್ನು ಸಂಗ್ರಹಿಸಿ ಆದ್ಯತೆ ಮೇರೆಗೆ ಅಗತ್ಯವಿರುವವರಿಗೆ ಲಭ್ಯವಾಗುವಂತೆ ವಿತರಿಸಲಾಗುವುದು ಎಂದು ಕಚೇರಿಯ ಅಧಿಕೃತ ಮೂಲಗಳು ತಿಳಿಸಿವೆ.
ಅವರ ಪ್ರಕಾರ, ಅಸ್ತಿತ್ವದಲ್ಲಿರುವ ರಾಜ್ಯಗಳು ಮತ್ತು ಜಿಲ್ಲೆಗಳ ಜಾಲದ ಮೂಲಕ ಲಸಿಕೆಯನ್ನು ಆದ್ಯತೆಯ ಗುಂಪುಗಳಿಗೆ ಉಚಿತವಾಗಿ ಲಭ್ಯವಾಗುವಂತೆ ಕೇಂದ್ರವು ನೇರವಾಗಿ ಸಂಗ್ರಹಿಸುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.