ತಿರುವನಂತಪುರ: ಬಸ್ ನಿಲ್ದಾಣದಲ್ಲಿ ಹುಡುಗ-ಹುಡುಗಿಯರು ಜೊತೆಯಾಗಿ ಕೂರುವುದನ್ನು ತಪ್ಪಿಸಲು ಆಸನವನ್ನು ಒಡೆದು ಪ್ರತ್ಯೇಕಿಸಿದ್ದ ಮೂರು ಸೀಟುಗಳನ್ನು ಶುಕ್ರವಾರ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಮೊದಲಿದ್ದಂತೆ ಆಸನವನ್ನು ನಿರ್ಮಿಸುವುದಾಗಿ ತಿಳಿಸಿದ್ದಾರೆ.
ತಿರುವನಂತಪುರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಸಮೀಪ ಶ್ರೀಕಾರ್ಯಮ್ ಎಂಬ ಸ್ಥಳದಲ್ಲಿದ್ದ ಬಸ್ ನಿಲ್ದಾಣದಲ್ಲಿ ಹುಡುಗ-ಹುಡುಗಿಯರು ಜೊತೆಯಾಗಿ ಕೂರುತ್ತಾರೆ ಎಂಬ ಕಾರಣಕ್ಕೆ ಸೀಟುಗಳನ್ನು ಒಡೆದು ಪ್ರತ್ಯೇಕಿಸಲಾಗಿತ್ತು. ಇದನ್ನು ವಿರೋಧಿಸಿ ವಿದ್ಯಾರ್ಥಿಗಳು ಒಬ್ಬರ ಮೇಲೆ ಒಬ್ಬರು ಕುಳಿತು ಪ್ರತಿಭಟಿಸಿದ್ದರು. ವಿದ್ಯಾರ್ಥಿಗಳ ಪ್ರತಿಭಟನೆಯ ಫೋಟೊ ವೈರಲ್ ಆಗಿತ್ತು.
ಮೇಯರ್ ಆರ್ಯಾ ಎಸ್. ರಾಜೇಂದ್ರನ್ ಅವರು ಅದೇ ಬಸ್ ನಿಲ್ದಾಣದಲ್ಲಿ ಲಿಂಗ ಭೇದವಿಲ್ಲದೆ ಎಲ್ಲರೂ ಕೂರಬಹುದಾದ ಆಸನವನ್ನು ನಿರ್ಮಿಸುವುದಾಗಿ ಭರವಸೆ ನೀಡಿದ್ದರು. ಇದೀಗ ನಗರಸಭೆ ಅಧಿಕಾರಿಗಳು ಎರಡು ತಿಂಗಳ ಬಳಿಕ ಒಡೆದು ನಿರ್ಮಿಸಲ್ಪಟ್ಟಿದ್ದ ಮೂರು ಪ್ರತ್ಯೇಕ ಆಸನಗಳನ್ನು ತೆರವು ಮಾಡಿದ್ದಾರೆ.
ಹುಡುಗ-ಹುಡುಗಿಯರು ತೊಡೆ ಮೇಲೆ ಕುಳಿತಿರುವ ಫೋಟೊಗಳು ವೈರಲ್ ಆದ ಬಳಿಕ ಜುಲೈ ತಿಂಗಳಲ್ಲಿ ಮೇಯರ್ ರಾಜೇಂದ್ರನ್ ಸ್ಥಳಕ್ಕೆ ಭೇಟಿ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.