ಆಲಪ್ಪುಳ: ಸಿಪಿಎಂ ಮತ್ತು ಸಿಪಿಐ ನಿರ್ಮಿಸಿರುವ ಪುನ್ನಪ್ರ ವಯಲಾರ್ ಚಳವಳಿ ಸ್ಮಾರಕಕ್ಕೆ ಬಿಜೆಪಿ ಅಭ್ಯರ್ಥಿ ಸಂದೀಪ್ ವಾಚಸ್ಪತಿ ಅವರು ಪುಷ್ಪ ನಮನ ಸಲ್ಲಿಸಿದ್ದು ವಿವಾದಕ್ಕೆ ಕಾರಣವಾಗಿದೆ. ನಾಮಪತ್ರ ಸಲ್ಲಿಕೆಗೆ ಮೊದಲು ಈ ಸ್ಮಾರಕಕ್ಕೆ ಭೇಟಿ ನೀಡಿದ ಸಂದೀಪ್ ಅವರು, ‘ಭಾರತ್ ಮಾತಾ ಕೀ ಜೈ’ ಎಂದು ಘೋಷಣೆ ಕೂಗಿದರು.
ತಿರುವಾಂಕೂರಿನ ಪ್ರಧಾನಿಯಾಗಿದ್ದ ಸರ್. ಸಿ.ಪಿ. ರಾಮಸ್ವಾಮಿ ಅಯ್ಯರ್ ಅವರ ‘ದುರಾಡಳಿತ’ದ ವಿರುದ್ಧ ಕಮ್ಯುನಿಸ್ಟ್ ಪಕ್ಷಗಳು 1946ರಲ್ಲಿ ನಡೆಸಿದ್ದ ಚಳವಳಿಯಲ್ಲಿ ನೂರಾರು ಕಾರ್ಯಕರ್ತರು ಬಲಿಯಾಗಿದ್ದರು. ಅವರ ಸ್ಮರಣೆಗೆ ಆಲಪ್ಪುಳ ಸಮೀಪದ ದೊಡ್ಡ ಸ್ಮಶಾನವೊಂದರಲ್ಲಿ ಈ ಸ್ಮಾರಕವನ್ನು ನಿರ್ಮಿಸಲಾಗಿದೆ.
ಸಂದೀಪ್ ಅವರು ಸ್ಮಾರಕಕ್ಕೆ ಅತಿಕ್ರಮಣ ಪ್ರವೇಶ ಮಾಡಿದ್ದಾರೆ ಎಂದು ಎಡಪಕ್ಷಗಳು ಆರೋಪಿಸಿವೆ. ಸಂದೀಪ್ ಅವರ ವಿರುದ್ಧ ಸಿಪಿಐ ಜಿಲ್ಲಾ ಕಾರ್ಯದರ್ಶಿಯು ದೂರು ದಾಖಲಿಸಿದ್ದಾರೆ.
ಆದರೆ, ಸಂದೀಪ್ ಅವರು ತಮ್ಮ ನಡವಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ‘ಕಮ್ಯುನಿಸ್ಟ್ ನಾಯಕರ ಅತಿ ದೊಡ್ಡ ವಂಚನೆಯ ಸಂಕೇತವಾಗಿ ಈ ಸ್ಮಾರಕ ಇದೆ. ಮುಗ್ಧ ಕಾರ್ಯಕರ್ತರನ್ನು ಇಲ್ಲಿ ಬಿಟ್ಟು ನಾಯಕರು ಪರಾರಿಯಾಗಿದ್ದರು’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.