ADVERTISEMENT

ಬಂಡೀಪುರದಲ್ಲಿ ರಾತ್ರಿ ವೇಳೆ ಸಂಚಾರ: ಕೇರಳ ನಿಯೋಗದಿಂದ ಶೀಘ್ರವೇ ಬಿಎಸ್‌ವೈ ಭೇಟಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 20:00 IST
Last Updated 12 ಡಿಸೆಂಬರ್ 2019, 20:00 IST
   

ತಿರುವನಂತಪುರ: ಬಂಡೀಪುರದಲ್ಲಿ ರಾತ್ರಿ ವೇಳೆ ಸಂಚಾರ ಸಂಬಂಧಶೀಘ್ರದಲ್ಲೇ ಕೇರಳದ ಉನ್ನತ ಮಟ್ಟದ ನಿಯೋಗವೊಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚೆ ನಡೆಸಲಿದೆ.

ಈ ವಿಚಾರದ ಕುರಿತು ಕೇಂದ್ರದ ಸಚಿವರನ್ನೂ ಭೇಟಿಯಾಗಿ ಚರ್ಚೆ ನಡೆಸಲು ನಿಯೋಗ ನಿರ್ಧರಿಸಿದೆ. ಕೇರಳದ ಸಾರಿಗೆ ಸಚಿವ ಎ.ಕೆ.ಶಶೀಂದ್ರನ್‌ ನೇತೃತ್ವ
ದಲ್ಲಿ ಬುಧವಾರ ಸಭೆ ನಡೆದಿದ್ದು, ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಬೇಕಾಗಿರುವ ಅಫಿಡವಿಟ್‌ ಸಿದ್ಧಪಡಿಸುವಂತೆ ಮುಖ್ಯ ಕಾರ್ಯದರ್ಶಿ ಹಾಗೂ ಲೋಕೋಪಯೋಗಿ ಇಲಾಖೆಗೆ ಸೂಚಿಸಿದ್ದಾರೆ.

ವಯನಾಡ್‌ ಹಾಗೂ ಮೈಸೂರನ್ನು ಸಂಪರ್ಕಿಸುವರಾಷ್ಟ್ರೀಯ ಹೆದ್ದಾರಿ 766ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಮೂಲಕ ಸಾಗುತ್ತಿದ್ದು, ಇದನ್ನು ಶಾಶ್ವತವಾಗಿ ಮುಚ್ಚಲು ಕರ್ನಾಟಕ ಹಾಗೂ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇಂಥ ನಿರ್ಧಾರ ಕೈಗೊಳ್ಳಬಾರದು ಎಂದು ಕೇರಳ ಒತ್ತಡ ಹೇರಲಿದೆ. ಪ್ರಸ್ತುತ ಇರುವಂಥ ನಿಯಮ
ವನ್ನು ಮುಂದುವರಿಸಿ, ರಾತ್ರಿ ವೇಳೆ ಎರಡೂ ರಾಜ್ಯದ ಸರ್ಕಾರಿ ಬಸ್‌ಗಳ ಸಂಚಾರಕ್ಕೆ ಅನುಮತಿ ನೀಡಬೇಕು ಎಂದು ನಿಯೋಗವು ಮನವಿ ಸಲ್ಲಿಸುವ ಸಾಧ್ಯತೆ ಇದೆ.

ADVERTISEMENT

ಪರ್ಯಾಯ ಮಾರ್ಗಕ್ಕೆ ಒತ್ತಡ: ‘ಕಣ್ಣೂರು ಜಿಲ್ಲೆಯ ಕೆಲ ರಾಜಕಾರಣಿಗಳು ಹಾಗೂ ಉದ್ಯಮಿಗಳು ಪರ್ಯಾಯ ಮಾರ್ಗ ನಿರ್ಮಾಣಕ್ಕೆ ಒತ್ತಡ ಹೇರುತ್ತಿದ್ದಾರೆ. ಕಣ್ಣೂರಿನಲ್ಲಿ ನಿರ್ಮಾಣವಾದ ನೂತನ ವಿಮಾನ ನಿಲ್ದಾಣಕ್ಕೆ ಉತ್ತಮ ಸಂಪರ್ಕ ದೊರಕಲಿದ್ದು, ಕಣ್ಣೂರಿನಿಂದ ಕೊಡಗು ಹಾಗೂ ಮೈಸೂರಿಗೆ ಸಂಪರ್ಕ ಸಾಧ್ಯವಾಗಲಿದೆ ಎನ್ನುವ ಕಾರಣಕ್ಕೆ ಪರ್ಯಾಯ ಮಾರ್ಗ ನಿರ್ಮಾಣಕ್ಕೂ ಒತ್ತಡ ಹೆಚ್ಚಿದೆ’ ಎಂದು ಬಂಡೀಪುರದಲ್ಲಿ ಸಂಚಾರ ನಿಷೇಧ ವಿರೋಧಿಸುತ್ತಿರುವ ಸಂಘಟನೆಯ ನಾಯಕರೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.