
ತಿರುವನಂತಪುರ: ಕೆಲಸದ ಒತ್ತಡದಿಂದಾಗಿ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಕಾರಣ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಬಹಿಷ್ಕಾರ ಹಾಕಿದ್ದರಿಂದ ಕೇರಳದಲ್ಲಿ ಸೋಮವಾರ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯದ ಮೇಲೆ ಪರಿಣಾಮ ಬೀರಿತು.
ಕಣ್ಣೂರು ಜಿಲ್ಲೆಯ ಪಯ್ಯಣ್ಣೂರಿನಲ್ಲಿ ಬಿಎಲ್ಒ ಆಗಿದ್ದ ಅನೀಶ್ ಜಾರ್ಜ್ (41) ಅವರ ಮೃತದೇಹವು ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಜಾರ್ಜ್ ಎಸ್ಐಆರ್ ಸಮೀಕ್ಷೆ ಕಾರ್ಯಕ್ಕೆ ಸಂಬಂಧಿಸಿದಂತೆ ಭಾರಿ ಒತ್ತಡಕ್ಕೆ ಸಿಲುಕಿದ್ದರು ಎಂದು ಸಂಬಂಧಿಕರು ದೂರಿದ್ದರು.
ರಾಜ್ಯ ಸರ್ಕಾರಿ ನೌಕರರು ಮತ್ತು ಶಿಕ್ಷಕರ ಕ್ರಿಯಾ ಮಂಡಳಿ ಮತ್ತು ಶಿಕ್ಷಕರ ಸೇವಾ ಸಂಸ್ಥೆಗಳ ಜಂಟಿ ಸಮಿತಿ ಸೇರಿದಂತೆ ರಾಜ್ಯ ಸರ್ಕಾರಿ ನೌಕರರ ವಿವಿಧ ಕಾರ್ಮಿಕ ಸಂಘಗಳ ಸದಸ್ಯರು ತಿರುವನಂತಪುರದ ಮುಖ್ಯ ಚುನಾವಣಾ ಅಧಿಕಾರಿ ಕಚೇರಿ ಮತ್ತು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
‘ಅಧಿಕಾರಿಗಳು ಬಿಎಲ್ಒಗಳ ಮೇಲೆ ಅತಿಯಾದ ಒತ್ತಡ ಹೇರುವುದನ್ನು ನಿಲ್ಲಿಸಬೇಕು. ಎಸ್ಐಆರ್ ಪ್ರಕ್ರಿಯೆಯನ್ನು ಮುಂದೂಡಬೇಕು’ ಎಂದು ಒತ್ತಾಯಿಸಿದರು.
ಸೋಮವಾರ ಮರಣೋತ್ತರ ಪರೀಕ್ಷೆಯ ನಂತರ ಜಾರ್ಜ್ ಅವರ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.
‘ಜಾರ್ಜ್ಗೆ ಸರಿಯಾಗಿ ಊಟ ಮತ್ತು ನಿದ್ದೆ ಮಾಡಲು ಸಮಯ ಸಿಗಲಿಲ್ಲ. ಎಸ್ಐಆರ್ ಭಾಗವಾಗಿ ವಹಿಸಿದ್ದ ಕೆಲಸವನ್ನು ಪೂರ್ಣಗೊಳಿಸಲು ಆತ ತೀವ್ರ ಒತ್ತಡದಲ್ಲಿದ್ದ’ ಎಂದು ಅವರ ಸೋದರ ಮಾವ ಸೈಜು ಸುದ್ದಿಗಾರರಿಗೆ ತಿಳಿಸಿದ್ದಾರೆ.
‘ಪರಿಷ್ಕರಣೆ ವಿಷಯವಾಗಿ ಜಾರ್ಜ್ಗೆ ಹಿರಿಯ ಅಧಿಕಾರಿಗಳು ಆಗಾಗ್ಗೆ ಸಂಪರ್ಕಿಸುತ್ತಿದ್ದರು. ಅಧಿಕ ಕೆಲಸದ ಹೊರೆಯನ್ನು ನೋಡಿದ ಜಾರ್ಜ್ ತಂದೆ, ಕೆಲಸ ಕಳೆದುಕೊಂಡರೂ ಚಿಂತಿಸಬೇಡ ಎಂದು ಮಗನಿಗೆ ಹೇಳಿದ್ದರು’ ಎಂದು ಸೈಜು ಹೇಳಿದ್ದಾರೆ.
‘ಜಾರ್ಜ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಸಿಪಿಎಂ ಕಾರ್ಯಕರ್ತರ ಪಾತ್ರದ ಕುರಿತು ತನಿಖೆ ನಡೆಸಬೇಕು’ ಎಂದು ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಆಗ್ರಹಿಸಿದ್ದಾರೆ.
‘ಸಮೀಕ್ಷೆ ಸಂದರ್ಭದಲ್ಲಿ ಕಾಂಗ್ರೆಸ್ ಬೂತ್ ಮಟ್ಟದ ಏಜೆಂಟ್ರೊಂದಿಗೆ ಹೋಗಿದ್ದಕ್ಕಾಗಿ ಜಾರ್ಜ್ ಅವರಿಗೆ ಸಿಪಿಎಂ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ. ಬಿಜೆಪಿ ಮತ್ತು ಸಿಪಿಐಎಂ ಎರಡೂ ಪಕ್ಷಗಳು ಕಾಂಗ್ರೆಸ್ನ ಸಾಂಪ್ರದಾಯಿಕ ಮತದಾರರನ್ನು ಪಟ್ಟಿಯಿಂದ ದೂರವಿಡಲು ಪ್ರಯತ್ನಿಸುತ್ತಿವೆ’ ಎಂದು ಆರೋಪಿಸಿದ್ದಾರೆ.
‘ಬಿಜೆಪಿ ದುರುದ್ದೇಶದಿಂದ ಎಸ್ಐಆರ್ ಜಾರಿಗೆ ತರುತ್ತಿದ್ದರೆ, ಕೇರಳದಲ್ಲಿ ಸಿಪಿಎಂ ಅದನ್ನು ಮುಂದಕ್ಕೆ ಕೊಂಡೊಯ್ಯುತ್ತಿದೆ. ನಾವು ಅದನ್ನು ಕಾನೂನುಬದ್ಧ ಮತ್ತು ರಾಜಕೀಯವಾಗಿ ವಿರೋಧಿಸುತ್ತೇವೆ’ ಎಂದು ಹೇಳಿದ್ದಾರೆ.
‘ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗವು ಬಿಎಲ್ಒಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು. ಸಂಪೂರ್ಣ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದ್ದಾರೆ.
ಚೆನ್ನೈ: ತಮಿಳುನಾಡಿನಾದ್ಯಂತ ನ.18ರಿಂದ ನಡೆಯಲಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯವನ್ನು ಬಹಿಷ್ಕರಿಸುವುದಾಗಿ ಎಂದು ಕಂದಾಯ ನೌಕರರ ಸಂಘಗಳ ಒಕ್ಕೂಟ ಸೋಮವಾರ ತಿಳಿಸಿದೆ.
‘ಅಧಿಕ ಕೆಲಸದ ಹೊರೆ ಕಡಿಮೆ ಮಾನವ ಸಂಪನ್ಮೂಲ ಗಡುವಿನ ಒತ್ತಡ ಅಸಮರ್ಪಕ ತರಬೇತಿ ಹಾಗೂ ಕಡಿಮೆ ಗೌರವ ಧನ ವಿರೋಧಿಸಿ ನ.18ರಿಂದ ರಾಜ್ಯದಾದ್ಯಂತ ಪ್ರತಿಭಟನೆ ನಡೆಯಲಿದೆ. ಕಂದಾಯ ಸಿಬ್ಬಂದಿ ಅಂಗನವಾಡಿ ಕಾರ್ಯಕರ್ತೆಯರು ಮಧ್ಯಾಹ್ನದ ಬಿಸಿಯೂಟ ನೌಕರರು ಪುರಸಭೆ ಮತ್ತು ನಿಗಮದ ಸಿಬ್ಬಂದಿ ಶಿಕ್ಷಕರು ಮತ್ತು ಬಿಎಲ್ಒಗಳು ತಹಶೀಲ್ದಾರರು ಗ್ರಾಮ ಆಡಳಿತಾಧಿಕಾರಿಗಳು ಗ್ರಾಮ ಸಹಾಯಕರು ಸರ್ವೆಯರ್ಗಳು ನಿರೀಕ್ಷಕರು ಮತ್ತು ಕಚೇರಿ ಸಹಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ’ ಎಂದು ಸಂಘವು ಪ್ರಕಟಣೆಯಲ್ಲಿ ತಿಳಿಸಿದೆ.
‘ಎಲ್ಲ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಬೇಕು. ಬೂತ್ ಮಟ್ಟದ ಕಚೇರಿಗಳಿಗೆ ಹೆಚ್ಚುವರಿ ಅಧಿಕಾರಿಗಳನ್ನು ನೇಮಿಸಬೇಕು. ಬಿಎಲ್ಒ ಮಟ್ಟದಲ್ಲಿ ಸಾಕಷ್ಟು ಸಿಬ್ಬಂದಿಯನ್ನು ನಿಯೋಜಿಸಬೇಕು. ಜಿಲ್ಲಾಧಿಕಾರಿಗಳು ಮಧ್ಯರಾತ್ರಿಯವರೆಗೆ ಪರಿಶೀಲನಾ ಸಭೆ ನಡೆಸುವುದನ್ನು ಮತ್ತು ಪರಿಶೀಲನೆ ಹೆಸರಿನಲ್ಲಿ ಪ್ರತಿದಿನ ಮೂರು ವಿಡಿಯೊ ಕಾನ್ಫರೆನ್ಸ್ ನಡೆಸುವುದನ್ನು ಕೂಡಲೇ ನಿಲ್ಲಿಸಬೇಕು’ ಎಂದು ಆಗ್ರಹಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.