ತಿರುವನಂತಪುರ: ದೇವಾಲಯದಲ್ಲಿ ಜಾತಿ ತಾರತಮ್ಯ ಎದುರಿಸಿದ್ದೇನೆ ಎಂದು ಕೇರಳ ದೇವಸ್ವಂ (ಮುಜರಾಯಿ) ಸಚಿವ ಕೆ.ರಾಧಾಕೃಷ್ಣನ್ ಅವರು ಆರೋಪಿಸಿರುವ ವಿಚಾರಕ್ಕೆ ಸಂಬಂಧಿಸಿ ಮಂಗಳವಾರ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ‘ಸಚಿವರೊಂದಿಗೆ ಚರ್ಚಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಚಿವರು ಜಾತಿ ತಾರತಮ್ಯ ಎದುರಿಸಿರುವ ವಿಚಾರ ಅರಿತು ಆಘಾತಗೊಂಡಿದ್ದೇನೆ’ ಎಂದು ಹೇಳಿದ್ದಾರೆ.
‘ದೇವಾಲಯವೊಂದರಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ದೀಪವನ್ನು ಬೆಳಗಿಸುವ ಹಲಗಾರತಿಯನ್ನು ನನ್ನ ಕೈಗೆ ನೀಡಲು ಇಬ್ಬರು ಅರ್ಚಕರು ನಿರಾಕರಿಸಿದ್ದರು. ಬದಲಿಗೆ ಅವರೇ ದೀಪವನ್ನು ಬೆಳಗಿಸಿ ಬಳಿಕ ಹಲಗಾರತಿಯನ್ನು ನೆಲದಲ್ಲಿರಿಸಿದ್ದರು’ ಎಂದು ಪರಿಶಿಷ್ಟ ಜಾತಿಗೆ ಸೇರಿದ ಸಚಿವ ರಾಧಾಕೃಷ್ಣನ್ ಸೋಮವಾರ ಆರೋಪಿಸಿದ್ದರು. ಆದರೆ ಸಚಿವರು ದೇವಾಲಯದ ಹೆಸರನ್ನು ಬಹಿರಂಗಪಡಿಸಿರಲಿಲ್ಲ.
ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನ ದೇವಾಲಯದಲ್ಲಿ ಈಚೆಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸಚಿವರು ಪಾಲ್ಗೊಂಡಿರುವ ದೃಶ್ಯವಿರುವ ವಿಡಿಯೊವನ್ನು ಸುದ್ದಿವಾಹಿನಿಗಳು ಪ್ರಸಾರ ಮಾಡಿವೆ. ಈ ದೃಶ್ಯದಲ್ಲಿ ಅರ್ಚಕರು ಸಚಿವರ ಕೈಗೆ ಹಲಗಾರತಿ ನೀಡದೆ ಕೆಳಗಿರಿಸಿರುವ ದೃಶ್ಯವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.