ಕೋಯಿಕ್ಕೋಡ್:ವಂಶ ರಾಜಕಾರಣದ ಐದನೇ ತಲೆಮಾರಿನ ನಾಯಕ ರಾಹುಲ್ ಗಾಂಧಿಗೆ ಕಠಿಣ ಪರಿಶ್ರಮಿ ನರೇಂದ್ರ ಮೋದಿ ಎದುರು ರಾಜಕಾರಣದಲ್ಲಿ ಅವಕಾಶವಿಲ್ಲ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಹೇಳಿದ್ದಾರೆ. ರಾಹುಲ್ ಅವರನ್ನು ಸಂಸತ್ಗೆ ಆಯ್ಕೆ ಮಾಡುವ ಮೂಲಕ ಕೇರಳವು ಹಾನಿಕಾರಕ ಕೆಲಸ ಮಾಡಿದೆ ಎಂದೂ ಅವರು ಹೇಳಿದ್ದಾರೆ.
ಕೇರಳ ಸಾಹಿತ್ಯ ಉತ್ಸವದ ಎರಡನೇ ದಿನವಾದ ಶುಕ್ರವಾರ ‘ದೇಶಪ್ರೇಮ ಮತ್ತು ತೀವ್ರಗಾಮಿ ದೇಶಭಕ್ತಿ’ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ‘ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಅದ್ಭುತ ಪಕ್ಷವಾಗಿದ್ದ ಕಾಂಗ್ರೆಸ್ ಈಗ ಒಂದು ಕುಟುಂಬ ಸಂಸ್ಥೆಯಾಗಿರುವುದು ಹಿಂದುತ್ವದ ಮತ್ತುತೀವ್ರಗಾಮಿ ದೇಶಭಕ್ತಿಯ ಆರೋಹಣಕ್ಕೆ ಕಾರಣವಾಗಿದೆ’ ಎಂದು ಹೇಳಿದ್ದಾರೆ.
‘ವೈಯಕ್ತಿಕವಾಗಿ ನನಗೆ ರಾಹುಲ್ ಗಾಂಧಿ ಬಗ್ಗೆ ಯಾವುದೇ ವಿರೋಧವಿಲ್ಲ. ಅವರೊಬ್ಬ ಯೋಗ್ಯ ಮತ್ತು ಉತ್ತಮ ನಡತೆಯ ವ್ಯಕ್ತಿ. ಆದರೆ,ವಂಶ ರಾಜಕಾರಣದ ಐದನೇ ತಲೆಮಾರಿನ ನಾಯಕನನ್ನು ಯುವ ಭಾರತವು ಒಪ್ಪುತ್ತಿಲ್ಲ. ನೀವು ಮಲಯಾಳಿಗರು ರಾಹುಲ್ ಗಾಂಧಿಯನ್ನು ಸಂಸತ್ಗೆ ಆಯ್ಕೆ ಮಾಡುವ ತಪ್ಪನ್ನು 2024ರಲ್ಲಿಯೂ ಮಾಡಿದ್ದೇ ಆದಲ್ಲಿ ನರೇಂದ್ರ ಮೋದಿಯವರಿಗೆ ಅನುಕೂಲ ಮಾಡಿಕೊಟ್ಟಂತಾಗಲಿದೆ’ ಎಂದು ಗುಹಾ ಹೇಳಿದ್ದಾರೆ.
‘ಕೇರಳಿಗರಾದ ನೀವು ಅನೇಕ ಅದ್ಭುತ ಕೆಲಸಗಳನ್ನು ಮಾಡಿದ್ದೀರಿ. ಆದರೆ ರಾಹುಲ್ ಗಾಂಧಿ ಅವರನ್ನು ಸಂಸತ್ಗೆ ಆರಿಸಿ ಕಳುಹಿಸುವ ಮೂಲಕ ಹಾನಿಕಾರಕ ಕೆಲಸ ಮಾಡಿದ್ದೀರಿ’ ಎಂದು ಅವರು ಹೇಳಿದ್ದಾರೆ.
ಮೋದಿ ಕಠಿಣ ಪರಿಶ್ರಮಿ:‘ನರೇಂದ್ರ ಮೋದಿ ಅವರಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಅವರು ರಾಹುಲ್ ಗಾಂಧಿಯಂತಲ್ಲ. ಅವರು ಸ್ವಯಂ ವರ್ಚಸ್ಸು ಬೆಳೆಸಿಕೊಂಡವರು. 15 ವರ್ಷ ರಾಜ್ಯದ ಆಡಳಿತ ನಡೆಸಿದ ಅನುಭವ ಉಳ್ಳವರು. ಅವರು ಕಠಿಣ ಪರಿಶ್ರಮಿ ಮಾತ್ರವಲ್ಲದೆ ರಜೆ ಪಡೆದು ಯುರೋಪ್ಗೆ ಹೋಗುವವರಲ್ಲ. ನನ್ನನ್ನು ನಂಬಿ. ಇದಾವುದನ್ನೂ ನಾನು ತಮಾಷೆಗೆ ಹೇಳುತ್ತಿಲ್ಲ’ ಎಂದೂ ಗುಹಾ ಹೇಳಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.