ADVERTISEMENT

ಕೇರಳ ಪ್ರವಾಹ: ರಕ್ಷಣಾ ಕಾರ್ಯಾಚರಣೆ ಅಂತ್ಯಗೊಳಿಸಿದ ನೌಕಾಪಡೆ

ಕೊಚ್ಚಿ ವಿಮಾನ ನಿಲ್ದಾಣ ಆಗಸ್ಟ್‌ 29ಕ್ಕ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2018, 1:33 IST
Last Updated 23 ಆಗಸ್ಟ್ 2018, 1:33 IST
   

ಕೊಚ್ಚಿ: ಪ್ರವಾಹದಿಂದ ತತ್ತರಿಸಿರುವ ಕೇರಳದಲ್ಲಿ ಸತತ 14 ದಿನಗಳಿಂದ ರಕ್ಷಣಾ ಕಾರ್ಯಾಚರಣೆ ಕೈಗೊಂಡು 16,005 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿರುವ ನೌಕಾಪಡೆಯು ಬುಧವಾರ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಿದೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ, ನೆರವಿಗಾಗಿ ಬರುವ ಮನವಿ ಪ್ರಮಾಣವೂ ಕ್ಷೀಣಿಸಿದೆ. ಹೀಗಾಗಿ ಕಾರ್ಯಾಚರಣೆಯನ್ನು ನಿಲ್ಲಿಸುತ್ತಿದ್ದೇವೆ ಎಂದು ನೌಕಾಪಡೆ ಹೇಳಿದೆ.

‘ನೌಕಾಪಡೆಯ ಆದೇಶದಂತೆ ಪ್ರವಾಹ ಸಂತ್ರಸ್ತರ ರಕ್ಷಣೆಗಾಗಿ ನಿಯೋಜಿಸಲಾಗಿರುವ #ಆಪರೇಷನ್‌ಮದಾದ್‌ ಪಡೆಯ ಸಿಬ್ಬಂದಿ ‘ನೀರಿನ ಹರಿವಿನ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಮನವಿಗಳೂ ಕಡಿಮೆಯಾಗಿವೆ’ ಎಂದು ತಿಳಿಸಿದ್ದಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ಆಪರೇಷನ್‌ ಮದಾದ್‌ ಕಾರ್ಯಾಚರಣೆಯು ಆಗಸ್ಟ್‌ 9ರಂದು ಆರಂಭವಾಗಿತ್ತು.

ನೌಕಾಪಡೆ ಮಾತ್ರವಲ್ಲದೆ, ಸೇನಾ ಸಿಬ್ಬಂದಿ, ವಾಯುಪಡೆಗಳು, ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಹಾಗೂ ಮೀನುಗಾರರೂ ಪರಿಹಾರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಪ್ರವಾಹದಿಂದಾಗಿ ಆಗಸ್ಟ್ 15 ರಿಂದ ಮುಚ್ಚಲ್ಪಟ್ಟಿರುವಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಆಗಸ್ಟ್ 29 ರಂದು ಪುನಃ ತೆರೆಯಲಿದೆ.

‘ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆಸಲ್ಲಿಸುವ ಸಲುವಾಗಿ ಆಗಸ್ಟ್‌ 26 ರಂದು ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ’ ಎಂದುಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.