ನವದೆಹಲಿ: ಕೊರೊನಾ ಪೀಡಿತರು ರಾಜ್ಯ ಪ್ರವೇಶಿಸದಂತೆ ತಡೆಯಲು ಹೆದ್ದಾರಿಯಲ್ಲಿ ಬ್ಯಾರಿಕೇಡ್ ಅಳವಡಿಸಿ ಕರ್ನಾಟಕದ ಗಡಿಯನ್ನು ಬಂದ್ ಮಾಡಿರುವ ಪ್ರಕರಣವನ್ನು ಇತ್ಯರ್ಥಪಡಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಕೇರಳ ಆರೋಪಿಸಿದೆ.
ಸೋಮವಾರ ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಹೇಳಿಕೆ (ಅಫಿಡವಿಟ್)ಯಲ್ಲಿ ಈ ಆರೋಪ ಮಾಡಿರುವ ಕೇರಳ ಸರ್ಕಾರ, ನ್ಯಾಯಪೀಠ ಆದೇಶ ನೀಡಿದ್ದರೂ ಸಮಸ್ಯೆ ಇತ್ಯರ್ಥಪಡಿಸುವಲ್ಲಿ ಕೇಂದ್ರ ವಿಫಲವಾವಾಗಿದೆ. ಹಾಗಾಗಿ, ಹೆದ್ದಾರಿ ಸಂಚಾರ ಮುಕ್ತಗೊಳಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಕರ್ನಾಟಕ ಸಲ್ಲಿಸಿರುವ ಮೇಲ್ಮನವಿ ವಜಾಗೊಳಿಸಬೇಕು ಎಂದು ಕೋರಿದೆ.
ಹೆದ್ದಾರಿ ಬಂದ್ ಮಾಡಿ ದಿಗ್ಬಂಧನ ಹೇರಿರುವ ಏಕಪಕ್ಷೀಯ ಕ್ರಮವು ಸಮಂಜಸವಲ್ಲ. ಈ ಮೂಲಕ ಜನರ ಆರೋಗ್ಯ ರಕ್ಷಣೆಯ ಹಕ್ಕನ್ನು ಕಸಿಯಲಾಗುತ್ತಿದೆ ಎಂದು ಕೇರಳ ದೂರಿದೆ.
ಉಭಯ ರಾಜ್ಯಗಳ ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳೊಂದಿಗೆಸಮಾಲೋಚನೆ ನಡೆಸಿ ಪ್ರಕರಣವನ್ನು ಇತ್ಯರ್ಥಪಡಿಸುವಂತೆ ಕಳೆದ ಶುಕ್ರವಾರ ನ್ಯಾಯಮೂರ್ತಿ ಎಲ್.ನಾಗೇಶ್ವರರಾವ್ ನೇತೃತ್ವದ ಪೀಠ ಕೇಂದ್ರಕ್ಕೆ ಸೂಚಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.