ADVERTISEMENT

ಎಡರಂಗದ ಆಡಳಿತದಲ್ಲಿ ಇಸ್ಲಾಮ್‌ ಉಗ್ರರ ಉತ್ಪಾದನಾ ಕೇಂದ್ರವಾದ ಕೇರಳ: ನಡ್ಡಾ ಆರೋಪ

ಪಿಟಿಐ
Published 6 ಮೇ 2022, 16:10 IST
Last Updated 6 ಮೇ 2022, 16:10 IST
ಜೆ.ಪಿ ನಡ್ಡಾ
ಜೆ.ಪಿ ನಡ್ಡಾ    

ಕೋಯಿಕ್ಕೋಡ್‌: ಕೇರಳದ ಎಡರಂಗ ಸರ್ಕಾರವು ‘ಇಸ್ಲಾಮಿಕ್ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಶುಕ್ರವಾರ ಆರೋಪಿಸಿದ್ದಾರೆ. ಅಲ್ಲದೇ, ಎಡರಂಗದ ಆಡಳಿತದಲ್ಲಿ ರಾಜ್ಯವು ಉಗ್ರರ ಉತ್ಪತ್ತಿ ಕೇಂದ್ರವಾಗಿದೆ ಎಂದೂ ಅವರು ಹೇಳಿದ್ದಾರೆ.

ಕೋಯಿಕ್ಕೋಡ್‌ನಲ್ಲಿ ಆಯೋಜಿಸಿದ್ದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಅಧ್ಯಕ್ಷ ನಡ್ಡಾ, ’ಸಿಪಿಐ(ಎಂ) ನೇತೃತ್ವದ ಎಡರಂಗ (ಎಲ್‌ಡಿಎಫ್) ಸರ್ಕಾರವು ಸಮಾಜದ ಪ್ರತಿಯೊಂದು ವರ್ಗವನ್ನು ಸಮಾನವಾಗಿ ಪರಿಗಣಿಸುವುದಾಗಿ ಭಾವನೆಯನ್ನು ಬಿತ್ತುತ್ತದೆ. ಆದರೆ ಅವರ ನೀತಿ ಹುಸಿ ಜಾತ್ಯತೀತತೆ. ಸಮಾಜದ ಒಂದು ವರ್ಗಕ್ಕೆ ವಿಶೇಷ ಸ್ಥಾನಮಾನಗಳನ್ನು ನೀಡುವ ಸಲುವಾಗಿ ಇತರರನ್ನು ವಿಭಜಿಸಲು ಅದು ಪ್ರಯತ್ನಿಸುತ್ತದೆ’ ಎಂದು ಆರೋಪಿಸಿದ್ದಾರೆ.

‘ಎಲ್‌ಡಿಎಫ್ ಸರ್ಕಾರ ತಟಸ್ಥವಾಗಿರುವುದಾಗಿ ತೋರಿಸಿಕೊಳ್ಳುತ್ತದೆ. ಆದರೆ, ಕೇರಳದಲ್ಲಿ ಇಸ್ಲಾಮಿಕ್ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿದೆ ಎಂದು ನಾನು ಹೇಳಲು ಬಯಸುತ್ತೇನೆ. ಇಸ್ಲಾಮಿಕ್ ಭಯೋತ್ಪಾದನೆಯು ಸಿಪಿಐ(ಎಂ) ಸರ್ಕಾರದ ಪ್ರೋತ್ಸಾಹ ಪಡೆಯುತ್ತಿದೆ. ಕೇರಳವು ಇಸ್ಲಾಮಿಕ್ ಭಯೋತ್ಪಾದನೆಯ ಉತ್ಪತ್ತಿ ಕೇಂದ್ರವಾಗಿದೆ. ಅದನ್ನು ನಾವು ಅರ್ಥಮಾಡಿಕೊಳ್ಳಬೇಕು’ ಎಂದು ನಡ್ಡಾ ಹೇಳಿದರು.

ADVERTISEMENT

ಧಾರ್ಮಿಕ ಸಮುದಾಯಗಳು, ವಿಶೇಷವಾಗಿ ಕೇರಳದ ಕ್ರಿಶ್ಚಿಯನ್ನರು ಕೇರಳದಲ್ಲಿ ಆಗುತ್ತಿರುವ ಜನಸಂಖ್ಯಾ ಬದಲಾವಣೆಗಳ ಬಗ್ಗೆ ಕಳವಳಗೊಂಡಿದ್ದಾರೆ ಎಂದು ಅವರು ತಿಳಿಸಿದರು.
‘ಕೇರಳ ಸಮಾಜದ ದೊಡ್ಡ ವರ್ಗ ಅಸೌಖ್ಯತೆ ಅನುಭವಿಸುತ್ತಿದೆ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ಜನಸಂಖ್ಯಾ ಬದಲಾವಣೆಗಳಿಂದಾಗಿ ಕೇರಳ ಸಮಾಜವು ಅಹಿತಕರ ಸನ್ನಿವೇಶಕ್ಕೆ ತಳ್ಳಲ್ಪಡುತ್ತಿದೆ. ವಿಶೇಷವಾಗಿ ಕ್ರಿಶ್ಚಿಯನ್ ಸಮುದಾಯದ ಧಾರ್ಮಿಕ ಮುಖಂಡರು ಜನಸಂಖ್ಯಾ ಬದಲಾವಣೆಯ ಸಮಸ್ಯೆಗಳನ್ನು ಪದೇಪದೆ ಪ್ರಸ್ತಾಪಿಸುತ್ತಿದ್ದಾರೆ. ಧಾರ್ಮಿಕ ಸಮುದಾಯವೊಂದು ಜನಸಂಖ್ಯಾ ಬದಲಾವಣೆಯ ಸಮಸ್ಯೆಗಳನ್ನು ಏಕೆ ಪದೇಪದೆ ಎತ್ತಿತೋರಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ‘ಮಾದಕವಸ್ತು ಜಿಹಾದ್’ ಬಗ್ಗೆಯೂ ಕ್ರಿಶ್ಚಿಯನ್ ಸಮುದಾಯದಿಂದ ಕಳವಳವಿದೆ’ ಎಂದು ನಡ್ಡಾ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.