ADVERTISEMENT

ಚಿನ್ನ ಕಳ್ಳಸಾಗಣೆ ಪ್ರಕರಣ: ಶಿವಶಂಕರ್‌ಗೆ ಜಾಮೀನು

ಪಿಟಿಐ
Published 25 ಜನವರಿ 2021, 15:17 IST
Last Updated 25 ಜನವರಿ 2021, 15:17 IST
ಎಂ.ಶಿವಶಂಕರ್‌
ಎಂ.ಶಿವಶಂಕರ್‌   

ಕೊಚ್ಚಿ: ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ, ಅಮಾನತುಗೊಂಡಿರುವ ಐಐಎಸ್‌ ಅಧಿಕಾರಿ ಎಂ.ಶಿವಶಂಕರ್‌ ಅವರಿಗೆ ಕೇರಳ ಹೈಕೋರ್ಟ್‌ ಸೋಮವಾರ ಷರತ್ತುಬದ್ಧ ಜಾಮೀನು ನೀಡಿದೆ.

ಕಳೆದ ವರ್ಷ ಅ.28ರಂದು ಜಾರಿ ನಿರ್ದೇಶನಾಲಯವು(ಇ.ಡಿ) ಇವರನ್ನು ಬಂಧಿಸಿತ್ತು. ಕೇರಳ ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಶಿವಶಂಕರ್‌ ಅವರ ವಿರುದ್ಧ ಚಿನ್ನ ಕಳ್ಳ ಸಾಗಣೆಗೆ ಸಂಬಂಧಿಸಿದಂತೆ ಕಸ್ಟಮ್ಸ್‌ ದಾಖಲಿಸಿದ್ದ ಪ್ರಕರಣದಲ್ಲೂ, ಎರ್ನಾಕುಳಂ ಹೆಚ್ಚುವರಿ ನ್ಯಾಯಾಂಗ ನ್ಯಾಯಾಲಯವು ಜಾಮೀನು ನೀಡಿದೆ. ನಿಗದಿತ ಅವಧಿಯಲ್ಲಿ ಆರೋಪಪಟ್ಟಿ ದಾಖಲಾಗದೇ ಹೋದರೆ ಜಾಮೀನು ಪಡೆಯುವ ಅವಕಾಶವನ್ನು ನ್ಯಾಯಾಲಯವು ನೀಡಿದೆ.

ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆ ವೇಳೆ ಡಾಲರ್‌ ಕಳ್ಳಸಾಗಣೆ ನಡೆಸಿರುವುದು ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜ.21ರಂದು ಕಸ್ಟಮ್ಸ್‌ ಶಿವಶಂಕರ್‌ ಅವರನ್ನು ಬಂಧಿಸಿತ್ತು. ಹೀಗಾಗಿ ಜಾಮೀನು ದೊರೆತರೂ, ಶಿವಶಂಕರ್‌ ಅವರು ಜೈಲಿನಲ್ಲೇ ಇರಲಿದ್ದಾರೆ.

ADVERTISEMENT

ಅ.28ರಿಂದ ಶಿವಶಂಕರ್‌ ಅವರು ಕಸ್ಟಡಿಯಲ್ಲಿ ಇದ್ದಾರೆ ಹಾಗೂ ಹಲವು ಬಾರಿ ವಿಚಾರಣೆಗೆ ಒಳಗಾಗಿದ್ದಾರೆ ಎನ್ನುವುದನ್ನು ಉಲ್ಲೇಖಿಸಿದ ಹೈಕೋರ್ಟ್‌, ಅರ್ಜಿದಾರರ ನ್ಯಾಯಾಂಗ ಬಂಧನದಲ್ಲಿ ಇರಬೇಕಾದ ಯಾವುದೇ ತಾರ್ಕಿಕ ವಿವರಣೆ ನನಗೆ ಕಾಣುತ್ತಿಲ್ಲ ಎಂದು ನ್ಯಾಯಮೂರ್ತಿ ಅಶೋಕ್‌ ಮೆನನ್‌ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.