ADVERTISEMENT

ಆಟ್ಟುಕಾಲ್ ಪೊಂಗಾಲ: ಹಿಂದೂಗಳಿಗೆ ಆತಿಥ್ಯ ನೀಡಲು ಮೌಲ್ವಿ ಕರೆ

ಪಿಟಿಐ
Published 28 ಫೆಬ್ರುವರಿ 2026, 15:44 IST
Last Updated 28 ಫೆಬ್ರುವರಿ 2026, 15:44 IST
ಕೇರಳದ ತಿರುವನಂತಪುರದಲ್ಲಿ ಪೊಂಗಲ್‌ ಆಚರಣೆ (ಸಂಗ್ರಹ ಚಿತ್ರ)
ಕೇರಳದ ತಿರುವನಂತಪುರದಲ್ಲಿ ಪೊಂಗಲ್‌ ಆಚರಣೆ (ಸಂಗ್ರಹ ಚಿತ್ರ)   

ತಿರುವನಂತಪುರ: ಆಟ್ಟುಕಾಲ್ ಪೊಂಗಾಲ ಹಬ್ಬದ ಆಚರಣೆಗೆ ನಗರಕ್ಕೆ ಬರುವ ಹಿಂದೂಗಳಿಗೆ ಮಸೀದಿಗಳು ಹಾಗೂ ತಮ್ಮ ಮನೆಗಳಲ್ಲಿ ಆತಿಥ್ಯ ನೀಡುವಂತೆ ಪಾಳಯಂ ಇಮಾಮ್‌ ವಿ.ಪಿ ಸುಹೈಬ್‌ ಮೌಲ್ವಿ ಅವರು ಮುಸ್ಲಿಮರಿಗೆ ಕರೆ ನೀಡಿದ್ದಾರೆ. ಈ ವಿಷಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. 

ಈ ವರ್ಷ ಮಾ.3ರಂದು ಆಟ್ಟುಕಾಲ್ ಪೊಂಗಾಲ ಹಬ್ಬ ಆಚರಿಸಲಾಗುತ್ತಿದೆ. ಅಂದು ಉತ್ಸವದಲ್ಲಿ ಭಾಗಿಯಾಗಲು ಲಕ್ಷಾಂತರ ಮಹಿಳೆಯರು ತಿರುವನಂತಪುರಕ್ಕೆ ಆಗಮಿಸುತ್ತಾರೆ. 

‘ವಿಭಿನ್ನ ನಂಬಿಕೆಯೊಂದಿಗೆ ಆಟ್ಟುಕಾಲ್ ಪೊಂಗಾಲ ಅನ್ನು ಆಚರಿಸಲಾಗುತ್ತದೆ. ಮುಸ್ಲಿಮರು ಈ ಆಚರಣೆಯಲ್ಲಿ ಭಾಗವಹಿಸದೇ ಹೋದರೂ, ಅತಿಥಿಗಳಾಗಿ ಭೇಟಿ ನೀಡುವ ಸಾವಿರಾರು ಮಹಿಳೆಯರು ಹಾಗೂ ಮಕ್ಕಳಿಗೆ ಆತಿಥ್ಯ ನೀಡುವ ಅವಕಾಶವನ್ನು ಈ ಸಂದರ್ಭವು ಒದಗಿಸುತ್ತದೆ’ ಎಂದು ತಮ್ಮ ಭಾಷಣದಲ್ಲಿ ಮೌಲ್ವಿ ಅವರು ಶುಕ್ರವಾರ ಹೇಳಿದರು. 

ADVERTISEMENT

‘ಕಳೆದ ವರ್ಷದಂತೆ ಈ ಬಾರಿಯೂ ಪವಿತ್ರ ರಂಜಾನ್‌ ಸಮಯದಲ್ಲಿ ಆಟ್ಟುಕಾಲ್ ಪೊಂಗಾಲ ಆಚರಿಸಲಾಗುತ್ತಿದೆ. ಸಂತೋಷ, ಭ್ರಾತೃತ್ವ ಮತ್ತು ಪ್ರೀತಿಯನ್ನು ಸಾರುವ ರಂಜಾನ್‌ ಹಬ್ಬದ ಆಶಯವನ್ನು, ನಮ್ಮ ಸಹೋದರಿಯರು ಮತ್ತು ಮಕ್ಕಳೊಂದಿಗೆ ನಾವು ಹಂಚಿಕೊಳ್ಳಬೇಕು’ ಎಂದರು. 

‘ನೀರು, ಆಹಾರ ಹಾಗೂ ವಿಶ್ರಾಂತಿಗೆ ವ್ಯವಸ್ಥೆ ಮಾಡಬೇಕು. ಮಸೀದಿ ಮತ್ತು ಮನೆಗಳನ್ನು ಅವರಿಗೆ ತೆರೆಯಬೇಕು. ನಮ್ಮ ಪ್ರೀತಿ ಮತ್ತು ಸಹೋದರತ್ವವನ್ನು  ಬಹಿರಂಗವಾಗಿ ಪ್ರದರ್ಶಿಸುವ ಸಂದರ್ಭವಾಗಿದೆ. ಸಾಮರಸ್ಯದ ಸಂದೇಶವನ್ನು ಬಲಪಡಿಸಲು ಈ ಹಬ್ಬವು ಸೂಕ್ತ ಅವಕಾಶವಾಗಿದೆ’ ಎಂದು ಹೇಳಿದರು. 

‘ದಿ ಕೇರಳ ಸ್ಟೋರಿ 2–ಗೋಸ್‌ ಬಿಯಾಂಡ್‌’ ಸಿನಿಮಾ ವಿವಾದದ ಸಂದರ್ಭದಲ್ಲಿ ಈ ಹೇಳಿಕೆಯು ಮಹತ್ವ ಪಡೆದುಕೊಂಡಿದ್ದು, ವಿಡಿಯೊ ನೋಡಿದ ಅನೇಕರು ‘ಇದು ನಿಜವಾದ ಕೇರಳದ ಕಥೆಯಾಗಬೇಕು’ ಎಂದು ಪ್ರತಿಕ್ರಿಯಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.