ADVERTISEMENT

ರಾಜ್ಯ ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿದೆ: ಹೈಕೋರ್ಟ್‌ಗೆ ಕೇರಳ ಸರ್ಕಾರ ಮಾಹಿತಿ

ಪಿಟಿಐ
Published 2 ನವೆಂಬರ್ 2023, 10:51 IST
Last Updated 2 ನವೆಂಬರ್ 2023, 10:51 IST
ಕೇರಳ ಹೈಕೋರ್ಟ್‌
ಕೇರಳ ಹೈಕೋರ್ಟ್‌   

ಕೊಚ್ಚಿ: ರಾಜ್ಯವು ತೀವ್ರ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದೆ ಎಂದು ಕೇರಳದ ಎಡರಂಗ ಸರ್ಕಾರವು ಹೈಕೋರ್ಟ್‌ಗೆ ತಿಳಿಸಿದೆ.

ಕೇರಳ ಸಾರಿಗೆ ಅಭಿವೃದ್ಧಿ ಹಣಕಾಸು ನಿಗಮದ (ಕೆಟಿಡಿಎಫ್‌ಸಿ) ಠೇವಣಿ ಹಿಂದಿರುಗಿಸುವ ಸಂಬಂಧ ಹೈಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಸರ್ಕಾರ ಹೀಗೆ ಹೇಳಿದೆ.

‘ಈಗ ನಮ್ಮ ರಾಜ್ಯ ಹಣಕಾಸಿನ ಮುಗ್ಗಟ್ಟಿನಲ್ಲಿದೆ. ಯಾವುದೇ ಅನುದಾನ ನೀಡಬೇಕಿದ್ದರೂ ಸರ್ಕಾರದ ಬಳಿ ಇರುವ ಹಣದಿಂದಷ್ಟೇ ಮಾಡಬೇಕಿದೆ’ ಎಂದು ಸರ್ಕಾರ ಹೇಳಿದೆ.

ADVERTISEMENT

ಸರ್ಕಾರ ಆರ್ಥಿಕ ತುರ್ತು ಪರಿಸ್ಥಿತಿಯಲ್ಲಿದೆಯೇ ಎನ್ನುವ ಕೋರ್ಟ್‌ನ ಪ್ರಶ್ನೆಗೆ ಸರ್ಕಾರ ಇಲ್ಲ ಎಂದಿದೆ.

ಕೆಟಿಡಿಎಫ್‌ಸಿ ಹಾಗೂ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ತಮ್ಮ ಹಣಕಾಸಿನ ತೊಂದರೆಯನ್ನು ಪರಿಹರಿಸಿಕೊಳ್ಳಲು ಆಸ್ತಿಯನ್ನು ಮಾರಬಹುದು ಅಥವಾ ಅಡ ಇಡಬಹುದು. ದುರದೃಷ್ಟವಶಾತ್‌ ಈ ಎರಡೂ ಸಂಸ್ಥೆಗಳಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಎರಡೂ ಸಂಸ್ಥೆಗಳು ಜಂಟಿಯಾಗಿ ₹ 1,000 ಕೋಟಿಯ ಆಸ್ತಿ ಹೊಂದಿದೆ ಎಂದು ಸರ್ಕಾರ ಅಫಿಡವಿಟ್‌ನಲ್ಲಿ ಹೇಳಿದೆ.

‌‌‌ಸರ್ಕಾರ ಭಾರಿ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದೆಯಾದರೂ, ಕೆಎಸ್‌ಆರ್‌ಟಿಸಿಯ ವಿವಿಧ ಖರ್ಚುಗಳಿಗೆ 2018–19ರ ಅಕ್ಟೋಬರ್‌ನಿಂದ 2023ರ ಅಕ್ಟೋಬರ್ 15ರ ವರೆಗೆ ₹ 8,440.02 ಕೋಟಿ ಖರ್ಚು ಮಾಡಿದೆ ಎಂದು ಇದೇ ವೇಳೆ ತಿಳಿಸಿದೆ.

‘ಸರ್ಕಾರ ಕೆಎಸ್‌ಆರ್‌ಟಿಸಿ ಒಳಗೊಂಡು ಸಾರ್ವಜನಿಕ ಕಂಪನಿಗಳಿಗೆ ಸರ್ಕಾರ ವಿವಿಧ ರೀತಿಯಲ್ಲಿ ಬೆಂಬಲ ನೀಡುತ್ತಿದೆಯಾದರೂ, ಅವುಗಳ ದೈನಂದಿನ ಖರ್ಚುಗಳಿಗೆ ಸಹಾಯ ಮಾಡುವ ಯಾವುದೇ ಕಾನೂನುಬದ್ಧ ನಿಯಮಗಳಿಲ್ಲ’ ಎಂದು ಸರ್ಕಾರ ಕೋರ್ಟ್‌ಗೆ ತಿಳಿಸಿದೆ.

ಕೆಟಿಡಿಎಫ್‌ಸಿಯ ಠೇವಣಿ ಹಣ ನೀಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಖಾಸಗಿ ಕಂಪನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸರ್ಕಾರ ಹೀಗೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.