ADVERTISEMENT

ಕೇರಳ: ಕರ್ತವ್ಯದ ಕೊನೆಯ ದಿನ ಕಚೇರಿ ನೆಲದಲ್ಲೇ ಮಲಗಿದ ಐಪಿಎಸ್‌ ಅಧಿಕಾರಿ

​ಪ್ರಜಾವಾಣಿ ವಾರ್ತೆ
Published 31 ಮೇ 2020, 15:11 IST
Last Updated 31 ಮೇ 2020, 15:11 IST
ಥಾಮಸ್‌ ಅವರು ಭಾನುವಾರ ಬೆಳಿಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿರುವ ಚಿತ್ರ
ಥಾಮಸ್‌ ಅವರು ಭಾನುವಾರ ಬೆಳಿಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿರುವ ಚಿತ್ರ   

ತಿರುವನಂತಪುರ: ಕರ್ತವ್ಯದ ಕೊನೆಯ ದಿನ, ನಿವೃತ್ತಿಗೂ ಮುನ್ನ ಕೇರಳದ ಹಿರಿಯ ಐಪಿಎಸ್‌ ಅಧಿಕಾರಿ ಜೇಕಬ್‌ ಥಾಮಸ್ ಅವರು ಕಚೇರಿಯ ನೆಲದಲ್ಲೇ ಮಲಗಿದ್ದಾರೆ.

1985ರ ಬ್ಯಾಚ್‌ನ ಅಧಿಕಾರಿಯಾಗಿರುವ ಥಾಮಸ್‌, ಬೆಡ್‌ಶೀಟ್‌ ಹಾಸಿರುವ ತಮ್ಮ ಕಚೇರಿಯ ಚಿತ್ರವನ್ನು ಭಾನುವಾರ ಬೆಳಿಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಜೊತೆಗೆ ಕೊಡಲಿಯನ್ನು ಹಿಡಿದಿರುವ ಚಿತ್ರವನ್ನೂ ಅಪ್‌ಲೋಡ್‌ ಮಾಡಿರುವ ಥಾಮಸ್‌, ‘ಪರಶುರಾಮನ ಕೊಡಲಿಯೊಂದಿಗೆ ಜೀವನದ ಮುಂದಿನ ಪಾತ್ರವನ್ನು ಆರಂಭಿಸುತ್ತೇನೆ’ ಎಂದು ಬರೆದಿದ್ದಾರೆ.

35 ವರ್ಷಗಳ ಸೇವಾನುಭವದಲ್ಲಿ ಥಾಮಸ್‌ ಕೇವಲ ಐದು ವರ್ಷಗಳ ಕಾಲ ಖಾಕಿ ಸಮವಸ್ತ್ರ ಧರಿಸಿದ್ದರು. ಉಳಿದಂತೆ ಅವರನ್ನು ಹಲವು ವರ್ಷಗಳ ಕಾಲ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ನಿಯೋಜಿಸಲಾಗಿತ್ತು. ನಿವೃತ್ತಿ ಸಂದರ್ಭದಲ್ಲಿ ಲೋಹದ ಉತ್ಪನ್ನಗಳನ್ನು ತಯಾರಿಸುವ ಕೈಗಾರಿಕಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.

ಕೊಡಗಿನಲ್ಲಿ ಅರಣ್ಯಭೂಮಿ ಒತ್ತುವರಿ ಸೇರಿದಂತೆ ಹಲವು ಭ್ರಷ್ಟಾಚಾರ ಆರೋಪಗಳು ಥಾಮಸ್‌ ಅವರ ಮೇಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಇವರನ್ನು ವಿಚಕ್ಷಣಾ ದಳದ ನಿರ್ದೇಶಕರಾಗಿ ನೇಮಿಸಿದ್ದರು. ಈ ಸಂದರ್ಭದಲ್ಲಿ ಹಲವು ಸಚಿವರು, ಐಎಎಸ್‌–ಐಪಿಎಸ್‌ ಅಧಿಕಾರಿಗಳ ವಿರುದ್ಧ ತನಿಖೆಯನ್ನು ಥಾಮಸ್‌ ಆರಂಭಿಸಿದ್ದರು. ನಂತರದಲ್ಲಿ ಈ ಹುದ್ದೆಯಿಂದ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಸರ್ಕಾರವನ್ನೇ ಟೀಕಿಸಿದ್ದಕ್ಕೆ ಮತ್ತು ಸರ್ಕಾರದ ಅನುಮತಿ ಇಲ್ಲದೆ ಸೇವಾನುಭವದ ಬಗ್ಗೆ ಪುಸ್ತಕ ಬರೆದಿದಕ್ಕಾಗಿ ಥಾಮಸ್‌ ಅವರನ್ನು ಎರಡು ವರ್ಷ ಅಮಾನತುಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.