ಆರ್. ಬಿಂದು
ಚಿತ್ರ: ಫೇಸ್ಬುಕ್
ತಿರುವನಂತಪುರ: ತ್ರಿಭಾಷಾ ನೀತಿ ಕುರಿತಂತೆ ತಮಿಳುನಾಡು ಸರ್ಕಾರ ಮತ್ತು ಕೇಂದ್ರದ ನಡುವೆ ಸಮರ ಮುಂದುವರಿದಿದ್ದು, ಪಕ್ಕದ ರಾಜ್ಯ ಕೇರಳ ನೀತಿಯನ್ನು ಬೆಂಬಲಿಸುವುದಾಗಿ ತಿಳಿಸಿದೆ. ಆದರೆ, ಹಿಂದಿ ಹೇರಿಕೆಯನ್ನು ಒಪ್ಪುವುದಿಲ್ಲ ಎಂದಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೇರಳ ಉನ್ನತ ಶಿಕ್ಷಣ ಸಚಿವೆ ಆರ್.ಬಿಂದು, ‘ಇಲ್ಲಿನ ವಿದ್ಯಾರ್ಥಿಗಳು ಬಹುಭಾಷೆಯನ್ನು ಕಲಿಯಬೇಕೆಂದು ನಾವು ಬಯಸುತ್ತೇವೆ. ಅದಕ್ಕಾಗಿ ಸೆಂಟರ್ ಆಫ್ ಎಕ್ಸ್ಲೆನ್ಸ್ ಫಾರ್ ಲ್ಯಾಂಗ್ವೇಜ್ ನೆಟ್ವರ್ಕಿಂಗ್ ಅನ್ನು ಸಹ ಸ್ಥಾಪಿಸಲಾಗಿದೆ’ ಎಂದರು.
ಅದಾಗ್ಯೂ, ಹಿಂದಿ ಹೇರಿಕೆಗೆ ನಮ್ಮ ವಿರೋಧವಿದೆ ಎಂದೂ ಹೇಳಿದರು.
‘ನಾವು ಎಲ್ಲಾ ಭಾಷೆಗಳ ಬಗ್ಗೆ ಗೌರವವನ್ನು ಹೊಂದಿದ್ದೇವೆ. ಮೊದಲಿನಿಂದಲೂ ಎಲ್ಲಾ ಭಾಷೆಗಳನ್ನು ಅಳವಡಿಸಿಕೊಳ್ಳುವುದು ಮತ್ತು ಸಂಯೋಜಿಸುವುದು ಕೇರಳದ ಸಂಸ್ಕೃತಿಯ ಭಾಗವಾಗಿದೆ’ ಎಂದು ಅವರು ಹೇಳಿದರು.
‘ನಮ್ಮ ಕರಾವಳಿಯ ಮೂಲಕ ವಿದೇಶಿಗರು ರಾಜ್ಯಕ್ಕೆ ಬಂದಿದ್ದಾರೆ. ಅಂದಿನಿಂದಲೇ ವಿದೇಶಿ ಭಾಷೆಗಳನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿದೆವು. ಇದು ಭಾಷಾ ವೈವಿಧ್ಯತೆಗೆ ಕಾರಣವಾಗಿತ್ತು. ಇದೀಗ ನಮ್ಮ ವಿದ್ಯಾರ್ಥಿಗಳು ಬಹು ಭಾಷೆಗಳನ್ನು ಅಧ್ಯಯನ ಮಾಡಲು ಪ್ರೋತ್ಸಾಹಿಸುತ್ತಿದ್ದೇವೆ. ಹೀಗಿದ್ದರೂ ನಮ್ಮ ಪ್ರಮುಖ ಆದ್ಯತೆ ಮಲಯಾಳಿ ಭಾಷೆಗೆ ಇರಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.