ADVERTISEMENT

ಕೇರಳ | ವಿದ್ಯಾರ್ಥಿ ಸಾವು ಪ್ರಕರಣ: ಬೆಲ್ಟ್‌, ವೈರ್‌ ಬಳಸಿ ಹಲ್ಲೆ

ಪಿಟಿಐ
Published 4 ಮಾರ್ಚ್ 2024, 13:36 IST
Last Updated 4 ಮಾರ್ಚ್ 2024, 13:36 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ವಯನಾಡು: ಕೇರಳ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಸಿದ್ಧಾರ್ಥನ್‌ ಅವರನ್ನು ವಿವಸ್ತ್ರಗೊಳಿಸಿ ಕ್ರೂರವಾಗಿ ಥಳಿಸಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ವರದಿ ನೀಡಿದ್ದಾರೆ. ಜೊತೆಗೆ, ಆರೋಪಿಗಳಿಗೆ ಜಾಮೀನು ನೀಡದಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.  

ಸಿದ್ಧಾರ್ಥನ್‌ ಮೃತದೇಹವು ವಿ.ವಿಯ ಹಾಸ್ಟೆಲ್‌ನ ಶೌಚಗೃಹದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಫೆ.18ರಂದು ಪತ್ತೆಯಾಗಿತ್ತು. ಪ್ರಕರಣದ ಎಲ್ಲಾ 18 ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. 

ADVERTISEMENT

ಸಿದ್ಧಾರ್ಥನ್‌ ಮೇಲೆ ಹಲ್ಲೆ ಮಾಡಲು ಬೆಲ್ಟ್‌ ಮತ್ತು ಕೇಬಲ್ ವೈರ್‌ ಬಳಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಹಲವು ಸೆಕ್ಷನ್‌ಗಳು ಮತ್ತು ರ‍್ಯಾಗಿಂಗ್ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಲೇಜಿನ ವಿದ್ಯಾರ್ಥಿನಿಯೊಂದಿಗೆ ಸಿದ್ಧಾರ್ಥನ್‌ ಅನುಚಿತವಾಗಿ ವರ್ತಿಸಿದ್ದ ಎಂದು ಆರೋಪಿಸಿದ್ದ ಆತನ ಸಹಪಾಠಿಗಳು ಮತ್ತು ಹಿರಿಯ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಧರಣಿ ನಡೆಸಿದ್ದರು. ಈ ವೇಳೆ ಸಿದ್ಧಾರ್ಥನ್‌ ಮನೆಗೆ ತೆರಳಿದ್ದ. ಅನುಚಿತ ವರ್ತನೆ ಕುರಿತ ವಿಷಯವನ್ನು ಇತ್ಯರ್ಥಪಡಿಸುವ ಸಲುವಾಗಿ ಆತನನ್ನು ಆರೋಪಿಗಳಲ್ಲಿ ಒಬ್ಬಾತ ಹಾಸ್ಟೆಲ್‌ಗೆ ವಾಪಸ್‌ ಕರೆಸಿದ್ದ. ಈ ಕುರಿತು ಪೊಲೀಸರಿಗೆ ದೂರು ನೀಡುವ ಬದಲು ಆತನನ್ನು ಥಳಿಸಿದ್ದ ಎಂದು ಪೊಲೀಸರು ನೀಡಿರುವ ವರದಿಯಲ್ಲಿ ಹೇಳಲಾಗಿದೆ.

ಫೆ.16ರ ಬೆಳಿಗ್ಗೆಯಿಂದ ಫೆ.17ರ ಮಧ್ಯಾಹ್ನದವರೆಗೂ ಸಂತ್ರಸ್ತ ವಿದ್ಯಾರ್ಥಿ ಮೇಲೆ ಹಲ್ಲೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. 

ಕೇರಳದ ಆಡಳಿತಾರೂಢ ಸಿಪಿಎಂನ ವಿದ್ಯಾರ್ಥಿ ಸಂಘಟನೆಯಾದ ಎಸ್‌ಎಫ್‌ಐನ ಸದಸ್ಯರು ಈ ಹತ್ಯೆ ನಡೆಸಿದ್ದಾರೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್‌ ಆರೋಪಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.