ಮಲ್ಲಿಕಾರ್ಜುನ ಖರ್ಗೆ
ನವದೆಹಲಿ: ಚೀನಾ, ಪಾಕಿಸ್ತಾನ ಸಂಬಂಧಿತ ಭದ್ರತಾ ಸವಾಲು ಕುರಿತು ಸಂಸತ್ತನ್ನು ವಿಶ್ವಾಸಕ್ಕೆ ಪಡೆಯಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಒತ್ತಾಯಿಸಿದ್ದಾರೆ.
ಕೇಂದ್ರವು ‘ಹುಸಿ ಧೈರ್ಯ, ಟೊಳ್ಳು ಪ್ರಚಾರ’ ನಡೆಸುತ್ತಿದೆ ಎಂದು ಆರೋಪಿಸಿರುವ ಅವರು, ದೇಶದ ಕಾರ್ಯತಂತ್ರ ಹಿತಾಸಕ್ತಿ ರಕ್ಷಿಸುವ ಹೊಣೆಗಾರಿಕೆ ಇದೆ ಎಂಬುದನ್ನೇ ಸರ್ಕಾರ ಮರೆತಿದೆ ಎಂದಿದ್ದಾರೆ.
ದೇಶದ ಭದ್ರತೆ ಕುರಿತಂತೆ ಇತ್ತೀಚಿನ ಎರಡು ಬೆಳವಣಿಗೆಗಳು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನಿರಾಸಕ್ತಿಯನ್ನು ಬಯಲು ಮಾಡಿದೆ ಎಂದು ಟೀಕಿಸಿದ್ದಾರೆ.
ಎಕ್ಸ್ನಲ್ಲಿ ಈ ಕುರಿತು ಮಾಡಿರುವ ಪೋಸ್ಟ್ನಲ್ಲಿ ಅವರು, ಪ್ಯಾಂಗಾಂಗ್ ಸರೋವರದ ಉತ್ತರ ಮತ್ತು ದಕ್ಷಿಣ ತುದಿ ಸಂಪರ್ಕಿಸುವಂತೆ ಚೀನಾ ಸೇತುವೆ ನಿರ್ಮಿಸಿದ್ದು, ಅದು ಬಳಕೆಯಲ್ಲಿರುವುದು ನಿಜವಲ್ಲವೇ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಡೆಮ್ಚೊಕ್ ವಲಯದಲ್ಲಿ ಡೆಪ್ಸಂಗ್ಗೆ ಸಮೀಪ ವಾಸ್ತವ ಗಡಿ ರೇಖೆಗೆ ಹೊಂದಿಕೊಂಡಂತೆ ಹೊಸ ಗ್ರಾಮ ಅಭಿವೃದ್ಧಿ ಪಡಿಸುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ, ಪ್ರಧಾನಿಯಾಗಿ ಮೋದಿ ಅಧಿಕಾರ ಸ್ವೀಕರಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ 25 ಭಯೋತ್ಪಾದಕ ದಾಳಿ ನಡೆದಿರುವುದು ಹಾಗೂ 15 ಯೋಧರು, ಭದ್ರತಾ ಸಿಬ್ಬಂದಿ ಸತ್ತು ಇತರೆ 27 ಮಂದಿ ಗಾಯಗೊಂಡಿರುವುದು ನಿಜವಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಈ ಬೆಳವಣಿಗೆಗಳು ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಗಂಭೀರ ಮತ್ತು ಸೂಕ್ಷ್ಮವಾದ ವಿಷಯವಾಗಿದೆ. ಇದನ್ನು ಎದುರಿಸಲು ಒಗ್ಗಟ್ಟಿನ, ರಚನಾತ್ಮಕ ಕ್ರಮ ಅಗತ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.