ADVERTISEMENT

ದೆಹಲಿ ಅತ್ಯಾಚಾರ ಪ್ರಕರಣ: ಆಸ್ತಿಗಾಗಿ ಕಥೆ ಕಟ್ಟಿದ ಯುವತಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಅಕ್ಟೋಬರ್ 2022, 9:48 IST
Last Updated 23 ಅಕ್ಟೋಬರ್ 2022, 9:48 IST
   

ಗಾಜಿಯಾಬಾದ್‌: ನಿರ್ಭಯಾ ಹತ್ಯೆ ನೆನಪಿಸುವ ಅತ್ಯಾಚಾರ ಘಟನೆಯೆಂದು ಸುದ್ದಿಯಾಗಿದ್ದ ಅತ್ಯಾಚಾರ ಪ್ರಕರಣಕ್ಕೀಗ ಹೊಸ ಟ್ವಿಸ್ಟ್‌ ಸಿಕ್ಕಿದೆ. ಆಸ್ತಿ ಪಡೆಯಲು ಯುವತಿ (36) ಅತ್ಯಾಚಾರದ ಕಥೆ ಕಟ್ಟಿದ್ದಳು ಎಂಬ ಸತ್ಯ ಪೊಲೀಸ್‌ ತನಿಖೆಯಿಂದ ಬೆಳಕಿಗೆ ಬಂದಿದೆ.

2 ದಿನಗಳ ಹಿಂದೆ ರಸ್ತೆಯಲ್ಲಿ ಚೀಲದಲ್ಲಿ ಕಟ್ಟಿ ಎಸೆದ ಸ್ಥಿತಿಯಲ್ಲಿ ಯುವತಿ ಪತ್ತೆಯಾಗಿದ್ದಳು. ಐವರು ಯುವತಿಯನ್ನು ಅಪಹರಣ ಮಾಡಿ ಸಾಮೂಹಿಕ ಅತ್ಯಾಚಾರವೆಸಗಿ, ಆಕೆಯ ಕೈಕಾಲುಗಳನ್ನು ಕಟ್ಟಿ ಚೀಲದಲ್ಲಿ ತುಂಬಿ ಎಸೆದುಹೋಗಿದ್ದರು ಎಂದು ಸುದ್ದಿಯಾಗಿತ್ತು. ಪ್ರಕರಣಕ್ಕೆ ಪ್ರತಿಕ್ರಿಯಿಸಿದ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷರು ‘ನಿರ್ಭಯಾ ಹತ್ಯೆಯನ್ನು ನೆನಪಿಸುವ ಮತ್ತೊಂದು ಪ್ರಕರಣ’ ಎಂದು ಟ್ವೀಟ್‌ ಮಾಡಿದ್ದರು.

ರಸ್ತೆಯಲ್ಲಿ ಬಿದ್ದಿದ್ದ ಯುವತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಗುಪ್ತಾಂಗದಲ್ಲಿ ಕಬ್ಬಿಣದ ರಾಡ್‌ ಹಾಕಿ ಭೀಕರವಾಗಿ ಅತ್ಯಾಚಾರ ಮಾಡಲಾಗಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷರು ಹೇಳಿದ್ದರು. ಈ ಸಂಬಂಧ ಗಾಜಿಯಾಬಾದ್‌ ಎಸ್‌ಪಿಗೆ ಘಟನೆ ವಿವರ ಕೇಳಿ ನೋಟಿಸ್‌ ಕೂಡ ಜಾರಿಗೊಳಿಸಿದ್ದರು.

ADVERTISEMENT

ದೆಹಲಿ ಮೂಲದ ಯುವತಿ ಆಸ್ತಿ ಪಡೆಯಲು ತಾನೇ ಈ ಕಥೆಯನ್ನು ಸೃಷ್ಟಿಸಿಕೊಂಡಿದ್ದಾಳೆ ಎಂಬುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಸಂಬಂಧ ಶನಿವಾರ ಆಕೆಯನ್ನು ಬಂಧಿಸಲಾಗಿದೆ. ಜೊತೆಗೆ ಆಕೆಗೆ ಸಹಕರಿಸಿದ್ದ ಇತರ ಮೂವರ ಮೇಲೆ ಪೊಲೀಸರು ಮೋಸ ಮತ್ತು ನಕಲು ಪ್ರಕರಣ ದಾಖಲಿಸಿದ್ದಾರೆ.

‘ಯುವತಿಯನ್ನು ಪೊಲೀಸ್‌ ತಂಡ ಬಂಧಿಸಿ ನ್ಯಾಯಾಲಕ್ಕೆ ಹಾಜರುಪಡಿಸಲಾಗಿದೆ. 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ’ ಎಂದು ಗಾಜಿಯಾಬಾದ್‌ ಎಸ್‌ಪಿ ನಿಪುನ್‌ ಅಗರ್‌ವಾಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.