
ನವದೆಹಲಿ: ‘ಲೋಕಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ ಅವರ ಮಾತುಗಳು ಸಂಪೂರ್ಣ ಸುಳ್ಳುಗಳಿಂದ ಕೂಡಿವೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಆರೋಪಿಸಿದ್ದು, ‘ಅವರು ಹೇಳಿರುವ ಈ ‘ಸುಳ್ಳು’ಗಳನ್ನು ಕಡತದಿಂದ ತೆಗೆಯುವಂತೆ ಆಡಳಿತಾರೂಢ ಎನ್ಡಿಎ ಒಕ್ಕೂಟ ಮನವಿ ಮಾಡಲಿದೆ’ ಎಂದು ಬುಧವಾರ ಹೇಳಿದ್ದಾರೆ.
ಬಜೆಟ್ ಮೇಲಿನ ಚರ್ಚೆ ವೇಳೆ, ರಾಹುಲ್ ಗಾಂಧಿ ತಮ್ಮ ಮಾತು ಮುಗಿಸುತ್ತಿದ್ದಂತೆಯೇ ಈ ಕುರಿತು ಪ್ರಸ್ತಾಪಿಸಿದ ರಿಜಿಜು,‘ರಾಹುಲ್ ಗಾಂಧಿ ಅವರು ತಾವು ಮಾಡಿರುವ ಆರೋಪಗಳನ್ನು ಸಾಬೀತುಪಡಿಸಬೇಕು ಎಂದು ಕೋರಿ ಎನ್ಡಿಎ ಸಂಸದರು ಸ್ಪೀಕರ್ ಅವರಿಗೆ ನೋಟಿಸ್ ಸಲ್ಲಿಸುವರು’ ಎಂದರು.
‘ತಾವು ಆಡಿರುವ ಮಾತುಗಳನ್ನು ದೃಢೀಕರಿಸುವುದಾಗಿ ರಾಹುಲ್ ಗಾಂಧಿ ಪ್ರಮಾಣ ಮಾಡಿದ್ದಾರೆ. ಆದರೆ, ಅವರು ಸುಳ್ಳು ಹೇಳಿರುವ ಕಾರಣ ತಾವು ಮಾಡಿರುವ ಆರೋಪಗಳನ್ನು ಸಾಬೀತುಪಡಿಸುವುದು ಅವರಿಂದ ಸಾಧ್ಯ ಇಲ್ಲ ಎಂಬುದು ನನಗೆ ಗೊತ್ತು’ ಎಂದು ರಿಜಿಜು ಹೇಳಿದರು.
‘ರಾಹುಲ್ ಗಾಂಧಿ ಅವರು ಪೆಟ್ರೋಲಿಯಂ ಸಚಿವ ಹರದೀಪ್ ಸಿಂಗ್ ವಿರುದ್ಧ ಗುರುತರವಾದ ಆರೋಪ ಮಾಡಿದ್ದಾರೆ. ಈ ಸಂಬಂಧ ಅವರು ಮುಂಚಿತವಾಗಿ ಯಾವುದೇ ನೋಟಿಸ್ಅನ್ನೂ ನೀಡಿರಲಿಲ್ಲ. ಇದು ಗಂಭೀರವಾದ ಹಕ್ಕುಚ್ಯುತಿ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.