ADVERTISEMENT

ಬಿಜೆಪಿ ಎರಡಂಕಿ ದಾಟದೆಂಬ ಪ್ರಶಾಂತ್‌ ಕಿಶೋರ್‌ ಟ್ವೀಟ್‌ಗೆ ಬಿಜೆಪಿ ತಿರುಗೇಟು

ಪ್ರಶಾಂತ್‌ ಕಿಶೋರ್‌ ಟ್ವೀಟ್‌ಗೆ ಬಿಜೆಪಿ ತಿರುಗೇಟು

ಪಿಟಿಐ
Published 21 ಡಿಸೆಂಬರ್ 2020, 14:27 IST
Last Updated 21 ಡಿಸೆಂಬರ್ 2020, 14:27 IST
   

ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳಿಸುವ ಕುರಿತು ಬಿಜೆಪಿ ಮತ್ತು ಚುನಾವಣಾ ನೀತಿ ನಿರೂಪಕ ಪ್ರಶಾಂತ್‌ ಕಿಶೋರ್ ನಡುವೆ ಟ್ವೀಟ್‌ ಸಮರ ಆರಂಭವಾಗಿದೆ.

‘ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡಂಕಿಯನ್ನೂ ದಾಟುವುದಿಲ್ಲ‘ ಎಂದು ಪ್ರಶಾಂತ್‌ ಕಿಶೋರ್‌ ಸೋಮವಾರ ಟ್ವೀಟ್‌ ಮಾಡಿದ್ದರು.

’ಬಿಜೆಪಿ ಪರ ಕೆಲ ಮಾಧ್ಯಮಗಳು ಆ ಪಕ್ಷದ ವೈಭವೀಕರಣದಲ್ಲಿ ತೊಡಗಿವೆ. ನಾನು ನಿರೀಕ್ಷಿಸಿರುವುದಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆದ್ದರೆ ಟ್ವಿಟರ್‌ನಿಂದ ನಿರ್ಗಮಿಸುತ್ತೇನೆ. ಚುನಾವಣೆ ಫಲಿತಾಂಶ ಬರುವವರೆಗೂ ಈ ಟ್ವೀಟ್‌ ಅನ್ನು ಉಳಿಸಿಕೊಳ್ಳಿ’ ಎಂದು ಟ್ವೀಟ್‌ನಲ್ಲಿ ಹೇಳಿದ್ದರು.

ADVERTISEMENT

ಕಿಶೋರ್‌ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ವಿಜಯ್‌ವರ್ಗಿಯ, ‘ಪಶ್ಚಿಮ ಬಂಗಾಳದಲ್ಲಿ ಸುನಾಮಿ ರೀತಿಯಲ್ಲಿ ಬಿಜೆಪಿ ಪರ ಅಲೆ ಎದ್ದಿದೆ. ವಿಧಾನಸಭೆ ಚುನಾವಣೆ ಬಳಿಕ ಹೊಸ ಸರ್ಕಾರ ರಚನೆಯಾದಾಗ ಒಬ್ಬ ಚುನಾವಣಾ ನೀತಿ ನಿರೂಪಕನಿಗೆ ಕೆಲಸವಿರುವುದಿಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ.

ಕೇಂದ್ರ ಸಚಿವ ಬಾಬುಲ್‌ ಸುಪ್ರಿಯೊ ಸಹ ಪ್ರತಿಕ್ರಿಯಿಸಿದ್ದಾರೆ. ‘ಈ ರೀತಿ ಹೇಳಿಕೆ ನೀಡುತ್ತಿರುವ ತಜ್ಞರೊಬ್ಬರು ತೃಣಮೂಲ್‌ ಕಾಂಗ್ರೆಸ್‌ನ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಇವರು ಯಾವ ಜಗತ್ತಿನಲ್ಲಿದ್ದಾರೆ' ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 200 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.