
ಭುವನೇಶ್ವರ: ಒಡಿಶಾದ ಭುವನೇಶ್ವರದ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಕೆಐಐಟಿ) ಹಮ್ಮಿಕೊಂಡಿದ್ದ 22ನೇ ಸಂಸ್ಥಾಪನಾ ದಿನದ ಸಮಾರಂಭದಲ್ಲಿ ‘ದಿ ಪ್ರಿಂಟರ್ಸ್ ಮೈಸೂರು ಲಿಮಿಟೆಡ್’ನ ನಿರ್ದೇಶಕ ಕೆ.ಎನ್.ಶಾಂತಕುಮಾರ್ ಅವರಿಗೆ ‘ಜೀವಮಾನ ಸಾಧನೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೆಐಐಟಿ ಮತ್ತು ಕೆಐಎಸ್ಎಸ್ ಸಂಸ್ಥಾಪಕ ಅಚ್ಯುತ ಸಮಂತ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಾಂತಕುಮಾರ್ ಅವರು, ‘ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಕಳಿಂಗ ಸಂಸ್ಥೆಯು ಇಡೀ ದೇಶಕ್ಕೇ ಯಶಸ್ಸಿನ ಪುನರ್ ವ್ಯಾಖ್ಯಾನ ಮಾಡಿದೆ. ಶಿಕ್ಷಣ ಎಂದರೆ ಕೇವಲ ಪದವಿ ಪಡೆಯುವುದಲ್ಲ, ಘನತೆ, ಅವಕಾಶ ಹಾಗೂ ಬದಲಾವಣೆಯ ಮಾರ್ಗ ಎನ್ನುವುದನ್ನು ಕಳಿಂಗ ಸಂಸ್ಥೆ ತೋರಿಸಿದೆ. ಇಲ್ಲಿ ಒಳಗೊಳ್ಳುವಿಕೆಯ ಬದ್ಧತೆ ಇದೆ. ಮುಖ್ಯವಾಹಿನಿಯಿಂದ ದೂರ ಉಳಿದ, ತಳಮಟ್ಟದ ಜನರನ್ನು ತಲುಪಿರುವುದು ಸಂಸ್ಥೆಯ ಹೆಗ್ಗುರುತಾಗಿದೆ’ ಎಂದು ಶ್ಲಾಘಿಸಿದರು.
ಶ್ರೀಲಂಕಾದ ಶ್ರೀ ಜಿನರಥನ ಭಿಕ್ಕು ಶಿಕ್ಷಣ ಮಂಡಳಿಯ ಕುಲಪತಿ ಕಿರಿಂದೆ ಅಸ್ಸಾಜಿ ನಾಯಕ ಥೆರೋ ಮಾತನಾಡಿ, ‘ಸಾಕಷ್ಟು ದೇಶಗಳಿಗೆ ಭೇಟಿ ನೀಡಿ, ಹಲವು ಸಂಸ್ಥೆ ನೋಡಿದ್ದೇನೆ. ಆದರೆ, ಕರುಣೆ, ಶಿಸ್ತು, ಮಾನವೀಯತೆ ಮತ್ತು ದೃಷ್ಟಿಕೋನಗಳನ್ನು ಒಂದೇ ಕಡೆ ಸೇರಿಸುವ ಅಪರೂಪದ ಸಂಸ್ಥೆ ಕಳಿಂಗ’ ಎಂದು ಶ್ಲಾಘಿಸಿದರು.
ಅಮೆರಿಕದ ಕೊಲಂಬಿಯಾದ ಹಾಸ್ಪಿಟಲಿಟಿ ಅಧ್ಯಕ್ಷ ಜಾನ್ ಎಫ್ ಒಪ್ಪೆನ್ಹೇಮರ್, ಸ್ವಿಟ್ಜರ್ಲೆಂಡ್ನ ರಿಪಾ ಇಂಟರ್ನ್ಯಾಷನಲ್ ಸೆಂಟರ್ನ ಧಾರ್ಮಿಕ ನಿರ್ದೇಶಕ ಗೆಟ್ರುಯೆಲ್ ಜಿಗ್ಮೆ ರಿನ್ಪೋಚೆ ಹಾಗೂ ಅಮೆರಿಕದ ಗ್ಲೋಬರ್ ಬ್ಯುಸಿನೆಸ್ ಲೀಡರ್ ಡಿಯನ್ನಾ ವಾಟ್ಸನ್ ಒಪ್ಪೆನ್ಹೇಮರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.