ADVERTISEMENT

ಕೊಚ್ಚಿ: ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ದೇಹ ಬೆಂಗಳೂರಿನ ವ್ಯಕ್ತಿಯದ್ದು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 16:04 IST
Last Updated 6 ಫೆಬ್ರುವರಿ 2026, 16:04 IST
<div class="paragraphs"><p>ತಂದೆ ಸೂರಜ್‌ ಲಾಮ ಅವರಿಗಾಗಿ ಪುತ್ರ ಸಂತೋನ್‌ ಲಾಮ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಕೊಚ್ಚಿ ನಗರದಲ್ಲಿ ಹುಡುಕಾಟ ನಡೆಸಿದ್ದರು&nbsp; </p></div>

ತಂದೆ ಸೂರಜ್‌ ಲಾಮ ಅವರಿಗಾಗಿ ಪುತ್ರ ಸಂತೋನ್‌ ಲಾಮ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಕೊಚ್ಚಿ ನಗರದಲ್ಲಿ ಹುಡುಕಾಟ ನಡೆಸಿದ್ದರು 

   

ಪ್ರಜಾವಾಣಿ ಚಿತ್ರ 

ತಿರುವನಂತಪುರ: ಕೊಚ್ಚಿ ನಗರದ ಜೌಗು ಪ್ರದೇಶವೊಂದರಲ್ಲಿ ಕಳೆದ ನವೆಂಬರ್‌ 30ರಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ದೇಹವು ಬೆಂಗಳೂರು ಮೂಲದ ಸೂರಜ್‌ ಲಾಮ (59) ಅವರದು ಎಂಬುದು ಖಚಿತವಾಗಿದೆ. 

ADVERTISEMENT

ದೇಹವನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದಾಗ, ಅವರ ಗುರುತು ದೃಢಪಟ್ಟಿದೆ.

‘ತಂದೆಯ ದೇಹ ಸಂಪೂರ್ಣ ಕೊಳೆತು ಹೋಗಿರುವ ಕಾರಣ, ನಗರದಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಗುವುದು’ ಎಂದು ಸೂರಜ್‌ ಅವರ ಪುತ್ರ ಸಂತೋನ್‌ ಲಾಮಅವರು ಕೊಚ್ಚಿ ನಗರದಲ್ಲಿ ಶುಕ್ರವಾರ ಹೇಳಿದರು.

ವಿವರ: ಬೆಂಗಳೂರಿನ ಕೊತ್ತನೂರಿನವರಾದ ಸೂರಜ್, ಕುವೈತ್‌ನಲ್ಲಿ 20ಕ್ಕೂ ಹೆಚ್ಚು ವರ್ಷಗಳಿಂದ ರೆಸ್ಟೋರೆಂಟ್‌ ನಡೆಸುತ್ತಿದ್ದರು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅವರಿಗೆ ಮರೆವಿನ ಕಾಯಿಲೆ ಕಾಣಿಸಿಕೊಂಡಿತ್ತು. ಅವರ ವೀಸಾ ಅವಧಿಯೂ ಮುಗಿದಿದ್ದ ಕಾರಣ, ಅಕ್ಟೋಬರ್‌ 5ರಂದು ಗಡಿಪಾರು ಮಾಡಲಾಗಿತ್ತು. ಆದರೆ, ಬೆಂಗಳೂರಿನ ಬದಲಾಗಿ ಅವರನ್ನು ಕೊಚ್ಚಿಗೆ ಕಳುಹಿಸಲಾಗಿತ್ತು.

ಕೊಚ್ಚಿ ನಗರದ ಬೀದಿಯೊಂದರಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ ಸೂರಜ್‌ ಅವರನ್ನು ಪೊಲೀಸರು ಸ್ಥಳೀಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ನೀಡಿದ ಕೆಲ ದಿನಗಳ ಬಳಿಕ ಅವರು ಆಸ್ಪತ್ರೆಯನ್ನು ತೊರೆದಿದ್ದರು. ಇದು ಅಲ್ಲಿನ ಸಿಬ್ಬಂದಿಯ ಗಮನಕ್ಕೂ ಬಂದಿರಲಿಲ್ಲ.

ಅಕ್ಟೋಬರ್‌ 7ರಂದು ಕೊಚ್ಚಿಗೆ ತೆರಳಿದ್ದ ಪುತ್ರ ಸಂತೋನ್‌, ತಂದೆಗಾಗಿ ಹುಡುಕಾಟ ನಡೆಸಿದ್ದರು. ತಂದೆ ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದುದು ಗೊತ್ತಿದ್ದರೂ ಸಹ, ಅವರ ಕುರಿತು ಕಾಳಜಿ ವಹಿಸದ ವಿಮಾನ ನಿಲ್ದಾಣ, ಆಸ್ಪತ್ರೆ ಹಾಗೂ ಪೊಲೀಸರ ವರ್ತನೆ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.

ನಂತರ ಅವರು, ಕೇರಳ ಹೈಕೋರ್ಟ್‌ನಲ್ಲಿ ಈ ಕುರಿತು ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ವಿಭಾಗೀಯ ಪೀಠ,‘ಸೂರಜ್‌ ಪ್ರಕರಣದಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ವೈಫಲ್ಯಗಳು ಕಂಡುಬರುತ್ತವೆ’ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು. 

‘ಸರ್ಕಾರಿ ಸಂಸ್ಥೆಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಿದ್ದಲ್ಲಿ, ಸೂರಜ್‌ ಅವರು ಬದುಕಿರುತ್ತಿದ್ದರು. ಇಂಥ ಘಟನೆ ನಡೆಯಲೇಬಾರದು. ಇಡೀ ವ್ಯವಸ್ಥೆಯ ಪರವಾಗಿ ನಾವು ಸೂರಜ್‌ ಕುಟುಂಬದವರಲ್ಲಿ ಕ್ಷಮೆ ಕೇಳಬಹುದಷ್ಟೆ’ ಎಂದು ನ್ಯಾಯಮೂರ್ತಿಗಳಾದ ದೇವನ್‌ ರಾಮಚಂದ್ರನ್‌ ಹಾಗೂ ಎಂ.ಬಿ.ಸ್ನೇಹಲತಾ ಶುಕ್ರವಾರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.