ADVERTISEMENT

ಲಿಂಗ ಸಮಾನತೆ:‘ಸುಪ್ರೀಂ’ಗೆ ರಾಷ್ಟ್ರಪತಿ ಕೋವಿಂದ್ ಮೆಚ್ಚುಗೆ

ಪಿಟಿಐ
Published 23 ಫೆಬ್ರುವರಿ 2020, 19:30 IST
Last Updated 23 ಫೆಬ್ರುವರಿ 2020, 19:30 IST
ರಾಷ್ಟ್ರಪತಿ ರಾಮನಾಥ ಕೋವಿಂದ್‌
ರಾಷ್ಟ್ರಪತಿ ರಾಮನಾಥ ಕೋವಿಂದ್‌    

ನವದೆಹಲಿ: ಲಿಂಗ ಸಮಾನತೆಯ ನ್ಯಾಯದ ಗುರಿ ತಲುಪುವಲ್ಲಿ ಭಾರತದ ನ್ಯಾಯಾಂಗವು ಶ್ಲಾಘನೀಯ ಕೆಲಸ ಮಾಡಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ ಸದಾ ‘ಕ್ರಿಯಾಶೀಲ ಮತ್ತು ಪ್ರಗತಿಪರ’ವಾಗಿ ಕೆಲಸ ಮಾಡಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಅಂತರರಾಷ್ಟ್ರೀಯ ನ್ಯಾಯಾಂಗ ಸಮಾವೇಶ 2020ರಲ್ಲಿ ಕೋವಿಂದ್‌ ಮಾತನಾಡಿದರು. ಪ್ರಗತಿಪರ ಮತ್ತು ಸಾಮಾಜಿಕ‍ಪರಿವರ್ತನೆಯ ಕೆಲಸಕ್ಕೆ ಸುಪ್ರೀಂ ಕೋರ್ಟ್‌ ನಾಯಕತ್ವ ವಹಿಸಿದೆ ಎಂದ ಅವರು, ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ, ಸುಪ್ರೀಂ ಕೋರ್ಟ್‌ ಎರಡು ದಶಕಗಳ ಹಿಂದೆ ರೂಪಿಸಿದ ವಿಶಾಖಾ ಮಾರ್ಗದರ್ಶಿ ಸೂತ್ರವನ್ನು ಉಲ್ಲೇಖಿಸಿದರು.

‘ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಎರಡು ದಶಕಗಳ ಹಿಂದೆ ಮಾರ್ಗದರ್ಶಿ ಸೂತ್ರ ರೂಪಿಸಲಾಗಿದೆ. ಈಗ, ಸೇನೆ ಯಲ್ಲಿ ಮಹಿಳೆಯರಿಗೆ ಸಮಾನ ಸ್ಥಾನ ಮಾನ ನೀಡುವ ತೀರ್ಪು ಪ್ರಕಟವಾಗಿದೆ. ಹೀಗೆ ಪ್ರಗತಿಪರವಾದ ಸಾಮಾಜಿಕ ಪರಿವರ್ತನೆಯ ಮುಂಚೂಣಿಯಲ್ಲಿ ಸುಪ್ರೀಂ ಕೋರ್ಟ್‌ ಇದೆ’ ಎಂದು ಹೇಳಿದರು.

ADVERTISEMENT

ಸುಪ್ರೀಂ ಕೋರ್ಟ್‌ನ ತೀರ್ಪು ಗಳು ಭಾರತದ 9 ಭಾಷೆಗಳಲ್ಲಿ ಲಭ್ಯ ವಾಗುವಂತೆ ಮಾಡಿದ ಕ್ರಮವನ್ನೂ ಕೋವಿಂದ್‌ ಮೆಚ್ಚಿಕೊಂಡರು. ಭಾರತದ ಭಾಷಾ ವೈವಿಧ್ಯದ ದೃಷ್ಟಿ ಯಿಂದ ಇದೊಂದು ಅಸಾಧಾರಣ ಕ್ರಮ ಎಂದೂ ಹೇಳಿದರು.

ಪರಿಸರ ರಕ್ಷಣೆ ಮತ್ತು ಸುಸ್ಥಿರ ಅಭಿ ವೃದ್ಧಿಯ ವಿಚಾರದಲ್ಲಿ ನ್ಯಾಯಾಂಗದ ಪಾತ್ರವನ್ನು ಉಲ್ಲೇಖಿಸಿದ ಅವರು, ಇದು ವಿವಿಧ ದೇಶಗಳ ಗಮನ ಸೆಳೆದಿದೆ ಎಂದರು. ಮಾಹಿತಿ ತಂತ್ರಜ್ಞಾನ ಕ್ರಾಂತಿಯ ಈ ದಿನಗಳಲ್ಲಿ ನ್ಯಾಯಾಂಗವು ಹೊಸ ಸವಾಲುಗಳನ್ನು ಎದುರಿಸಬೇಕಿದೆ. ದತ್ತಾಂಶ ರಕ್ಷಣೆ ಮತ್ತು ಖಾಸಗಿತನದ ಹಕ್ಕಿಗೆ ಸಂಬಂಧಿಸಿದ ಹೊಸ ಪ್ರಶ್ನೆಗಳು ಈಗ ಎದುರಾಗಿವೆ ಎಂದು ವಿವರಿಸಿದರು.

ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಜಗತ್ತಿನ ವಿವಿಧೆಡೆಯ ಕೋರ್ಟ್‌ಗಳು ಉಲ್ಲೇಖಿಸುತ್ತಿವೆ. ಹಾಗಾಗಿ, ಸ್ವತಂತ್ರ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪಾಲಿಗೆಭಾರತವು ದಾರಿದೀಪವಾಗಿದೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ಹೇಳಿದರು.

ಸಂಧಾನ ಮಾತುಕತೆಗಳ ಸಕಾರಾತ್ಮಕ ಪರಿಣಾಮಗಳ ಬಗ್ಗೆ ಅವರು ಮಾತನಾಡಿದರು. ನ್ಯಾಯದಾನದ ಬದ್ಧತೆಯು ವಿವಿಧ ನ್ಯಾಯಾಲಯಗಳ ನ್ಯಾಯಮೂರ್ತಿಗಳ ನಡುವಣ ಸಮಾನ ತಂತು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.