ಮುಂಬೈ: ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಮತ್ತು ಶಿವಸೇನಾ (ಯುಬಿಟಿ) ವಕ್ತಾರೆ ಸುಷ್ಮಾ ಅಂಧಾರೆ ವಿರುದ್ಧ ಹಕ್ಕುಚ್ಯುತಿ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಮಾರ್ಚ್ನಲ್ಲಿ ನಡೆದ ಬಜೆಟ್ ಅಧಿವೇಶನದಲ್ಲಿ ವಿಧಾನ ಪರಿಷತ್ತಿನಲ್ಲಿ ಕಾಮ್ರಾ ಮತ್ತು ಸುಷ್ಮಾ ಅಂಧಾರೆ ವಿರುದ್ಧ ಬಿಜೆಪಿ ಶಾಸಕ ಪ್ರವೀಣ್ ದರೇಕರ್ ಅವರು ನಿಲುವಳಿ ಸೂಚನೆ ಮಂಡಿಸಿದ್ದರು.
ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಬಗ್ಗೆ ವೈಯಕ್ತಿಕ ಹಾಗೂ ಅವಹೇಳನಕಾರಿ ಅಂಶಗಳಿರುವ ಹಾಡನ್ನು ಕುನಾಲ್ ಹಾಡಿದ್ದಾರೆ ಎಂದು ನಿಲುವಳಿ ಸೂಚನೆ ಮಂಡಿಸುವ ಸಂದರ್ಭದಲ್ಲಿ ಪ್ರವೀಣ್ ಅವರು ಹೇಳಿದ್ದರು. ಸುಷ್ಮಾ ಅವರು ಕಾರ್ಯಕ್ರಮವನ್ನು ಬೆಂಬಲಿಸಿ ಆಕ್ಷೇಪಾರ್ಹ ಭಾಷೆ ಬಳಸಿದ್ದಾರೆ, ಇದು ಸದನದ ನಿಂದನೆಗೆ ಸಮ ಎಂದು ಅವರು ಹೇಳಿದ್ದರು. ಕುನಾಲ್ ಮತ್ತು ಸುಷ್ಮಾ ಅವರು ತಮ್ಮ ಮಾತುಗಳ ಮೂಲಕ ಶಾಸನ ಸಭೆಗಳನ್ನು ಅಗೌರವದಿಂದ ಕಂಡಿದ್ದಾರೆ ಎಂದು ಪ್ರವೀಣ್ ಆರೋಪಿಸಿದ್ದರು.
ಸುಷ್ಮಾ ಅವರು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರನ್ನು ಅಣಕಿಸಿದ್ದಾರೆ ಎಂದು ದೂರಿ ಶಿವಸೇನಾ ಶಾಸಕ ರಮೇಶ್ ಬೋರ್ನಾರೆ ಅವರು ವಿಧಾನಸಭೆಯಲ್ಲಿ ಹಕ್ಕುಚ್ಯುತಿ ನೋಟಿಸ್ ನೀಡಿದ್ದರು.
ವಿಧಾನ ಪರಿಷತ್ ಸಭಾಪತಿ ರಾಮ್ ಶಿಂಧೆ ಅವರು ಬಿಜೆಪಿ ಎಂಎಲ್ಸಿ ಪ್ರಸಾದ್ ಲಾಡ್ ನೇತೃತ್ವದಲ್ಲಿ ಹಕ್ಕುಸ್ವಾಮ್ಯ ಸಮಿತಿಗೆ ನೋಟಿಸ್ ಕಳುಹಿಸಿದ್ದಾರೆ ಎಂದು ಶಾಸಕಾಂಗ ಕಾರ್ಯದರ್ಶಿ ಜಿತೇಂದ್ರ ಭೋಲೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.