ಪರಿಶಿಷ್ಟ ಪಂಗಡದ (ಎಸ್ಟಿ) ಸ್ಥಾನಮಾನಕ್ಕೆ ಆಗ್ರಹಿಸಿ ಕುರ್ಮಿಗಳು ಜಾರ್ಖಂಡ್ನ ಸರಾಯ್ಕೆಲಾ– ಖರಸಾವಾ ಜಿಲ್ಲೆಯ ಸಿನಿ ರೈಲ್ವೆ ನಿಲ್ದಾಣಕ್ಕೆ ಶನಿವಾರ ದಿಗ್ಬಂಧನ ಹಾಕಿದರು
(ಪಿಟಿಐ ಚಿತ್ರ)
ರಾಂಚಿ: ಜಾರ್ಖಂಡ್ನಲ್ಲಿ ವಿವಿಧ ಬೇಡಿಕೆ ಈಡೇರಿಕೆಗಾಗಿ ನಡೆಸುತ್ತಿದ್ದ ರೈಲ್ವೆ ದಿಗ್ಬಂಧನ ಹೋರಾಟವನ್ನು ಕುರ್ಮಿ ಸಮುದಾಯವು ಭಾನುವಾರ ಹಿಂಪಡೆದಿದೆ.
ಪರಿಶಿಷ್ಟ ಪಂಗಡದ (ಎಸ್ಟಿ) ಸ್ಥಾನಮಾನ ಮತ್ತು ಕುರ್ಮಾಲಿ ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವಂತೆ ಒತ್ತಾಯಿಸಿ ಕುರ್ಮಿ ಸಮುದಾಯದ ಹೋರಾಟಗಾರರು ರೈಲ್ವೆ ದಿಗ್ಬಂಧನ ನಡೆಸುತ್ತಿದ್ದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಕುರಿತಂತೆ ಚಳವಳಿಗಾರರೊಂದಿಗೆ ಸಭೆ ನಡೆಸುವರು ಎಂದು ಕೇಂದ್ರ ಸರ್ಕಾರ ಭರವಸೆ ನೀಡುತ್ತಿದ್ದಂತೆ, ಹೋರಾಟಗಾರರು ದಿಗ್ಬಂಧನ ವಾಪಸ್ ಪಡೆದರು. ಸಭೆಯ ದಿನಾಂಕ ನಿಗದಿ ಆಗಿಲ್ಲ.
ಶನಿವಾರ ರಾತ್ರಿಯೇ ಎಲ್ಲ ರೈಲು ನಿಲ್ದಾಣಗಳಿಂದ ದಿಗ್ಬಂಧನ ವಾಪಸ್ ಪಡೆಯಲಾಗಿತ್ತು. ಸರಾಯ್ಕೆಲಾ– ಖರಸಾವಾ ಜಿಲ್ಲೆಯ ಸಿನಿ ಹಾಗೂ ಧನಾಬಾದ್ ಜಿಲ್ಲೆಯ ಪ್ರಧಾನಖಾಂಟಾ ನಿಲ್ದಾಣಗಳ ದಿಗ್ಬಂಧನವನ್ನು ಭಾನುವಾರ ಬೆಳಿಗ್ಗೆ 10 ಗಂಟೆ ಆಸುಪಾಸಿನಲ್ಲಿ ಹಿಂತೆಗೆದುಕೊಳ್ಳಲಾಗಿದೆ ಎಂದು ಕುರ್ಮಿ ವಿಕಾಸ್ ಮೋರ್ಚಾದ ಕೇಂದ್ರ ಅಧ್ಯಕ್ಷ ಶೀತಲ್ ಒಹ್ದಾರ್ ತಿಳಿಸಿದ್ದಾರೆ.
ಜಾರ್ಖಂಡ್ನಾದ್ಯಂತ ಶನಿವಾರ ರೈಲ್ವೆ ದಿಗ್ಬಂಧನ ಚಳವಳಿ ನಡೆಯಿತು. ಇದರಿಂದ ಅನೇಕ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ವಿವಿಧ ಬುಡಕಟ್ಟು ಸಂಘಟನೆಗಳು ಕುರ್ಮಿ ಸಮುದಾಯದ ಚಳವಳಿ ವಿರೋಧಿಸಿವೆ. ರಾಂಚಿಯ ರಾಜಭವನದ ಬಳಿ ಶನಿವಾರ ಪ್ರತಿಭಟಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.