ADVERTISEMENT

ಹಿಂಸಾಚಾರಕ್ಕೆ ತಿರುಗಿದ ಎಲ್‌ಆ್ಯಂಡ್‌ ಟಿ ಕಂಪನಿಯ ಕಾರ್ಮಿಕರ ಪ್ರತಿಭಟನೆ

ಪಿಟಿಐ
Published 26 ಫೆಬ್ರುವರಿ 2026, 15:48 IST
Last Updated 26 ಫೆಬ್ರುವರಿ 2026, 15:48 IST
   

ಅಹಮದಾಬಾದ್‌: ವೇತನ ಹೆಚ್ಚಿಸಬೇಕು, 12 ಗಂಟೆಗಳ ಕೆಲಸದ ಅವಧಿಯನ್ನು 8 ಗಂಟೆಗೆ ತಗ್ಗಿಸಬೇಕು ಎಂದು ಆಗ್ರಹಿಸಿ, ಸೂರತ್‌ ಸಮೀಪದ ಹಜೀರಾ ಕೈಗಾರಿಕಾ ಪ್ರದೇಶದಲ್ಲಿರುವ ಎಲ್‌ಆ್ಯಂಡ್‌ ಟಿ ಕಂಪನಿಯ ಉಕ್ಕು ತಯಾರಿಕಾ ಘಟಕದ ನೂರಾರು ಕಾರ್ಮಿಕರು ಗುರುವಾರ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು. 

ಪ್ರತಿಭಟನಾಕಾರರು ಕಾರೊಂದಕ್ಕೆ ಬೆಂಕಿ ಹಚ್ಚಿ, ಹಲವು ವಾಹನಗಳನ್ನು ಹಾನಿಗೊಳಿಸಿದರು. ಪೊಲೀಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಸಿಡಿಸಿ ಪ್ರತಿಭಟನಾಕಾರರನ್ನು ಚದುರಿಸಿದರು. ಹಲವು ಕಾರ್ಮಿಕರಿಗೆ ಗಾಯಗಳಾಗಿವೆ. ಪ್ರತಿಭಟನೆಯಲ್ಲಿ ತೊಡಗಿದ್ದ 20ಕ್ಕೂ ಹೆಚ್ಚು ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದು, ಅವರ ವಿರುದ್ಧ ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ. 

ಘಟನೆಗೆ ಕಾರಣವೇನು: ಉಕ್ಕು ಘಟಕದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಲ್ಲಿ ಬಹುತೇಕರು ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳ ವಲಸೆ ಕಾರ್ಮಿಕರಾಗಿದ್ದಾರೆ. ಕಂಪನಿಯ ಭದ್ರತಾ ಸಿಬ್ಬಂದಿ ಕಾರ್ಮಿಕರೊಂದಿಗೆ ವಾಗ್ವಾದ ನಡೆಸಿ ಕೆಲವರನ್ನು ಥಳಿಸಿದರು. ಇದನ್ನು ಪ್ರತಿಭಟಿಸಿ ಕಾರ್ಮಿಕರು ಮೆರವಣಿಗೆ ನಡೆಸಲು ಮುಂದಾದಾರು. ಭದ್ರತಾ ಸಿಬ್ಬಂದಿ ಮತ್ತೆ ಹಲ್ಲೆ ನಡೆಸಲು ಮುಂದಾದಾಗ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು ಎಂದು ಕಾರ್ಮಿಕರು ಹೇಳಿದ್ದಾರೆ. 

ADVERTISEMENT
12 ಗಂಟೆ ಕೆಲಸ ಮಾಡಿದರೆ ಕಾರ್ಮಿಕರಿಗೆ ಕೇವಲ ₹600ರಿಂದ ₹700 ವೇತನ ಪಾವತಿಸಲಾಗುತ್ತದೆ. ವೇತನವನ್ನು ಪರಿಷ್ಕರಣೆ ಮಾಡಬೇಕು ಎಂದು ಕಾರ್ಮಿಕರು ಒತ್ತಾಯಿಸಿದರು. 
ಹಜೀರಾ ಕೈಗಾರಿಕಾ ಪ್ರದೇಶವು ಸೂರತ್‌ನಿಂದ 25 ಕಿ.ಮೀ ದೂರದಲ್ಲಿದೆ. ಆರ್ಸೆಲರ್ ಮಿತ್ತಲ್ ಮತ್ತು ಜಪಾನಿನ ನಿಪ್ಪಾನ್ ಸ್ಟೀಲ್ ಕಂಪನಿಯ ಸಹಭಾಗಿತ್ವದ ಉಕ್ಕು ತಯಾರಿಕಾ ಘಟಕ ಇದಾಗಿದೆ. ’ಕಾರ್ಮಿಕರು ವಾಹನಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ಆರಂಭಿಸಿದಾಗ ಪರಿಸ್ಥಿತಿ ನಿಯಂತ್ರಿಸಲು ಲಾಠಿ ಪ್ರಹಾರ, ಅಶ್ರುವಾಯು ಸಿಡಿಸಿಲಾಯಿತು’ ಎಂದು ಸೂರತ್‌ನ ಡಿಸಿಪಿ ಶೈಫಾಲಿ ಬರ್ವಾಲ್‌ ಸುದ್ದಿಗಾರರಿಗೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.