ADVERTISEMENT

ಲಖಿಂಪುರ ಖೇರಿ ಪ್ರಕರಣ: ಹುಟ್ಟೂರಿಗೆ ಭೇಟಿ ನೀಡಲು ಆಶಿಶ್‌ಗೆ ‘ಸುಪ್ರೀಂ’ ಸಮ್ಮತಿ

ಪಿಟಿಐ
Published 11 ಡಿಸೆಂಬರ್ 2025, 13:17 IST
Last Updated 11 ಡಿಸೆಂಬರ್ 2025, 13:17 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಆರೋಪಿ, ಕೇಂದ್ರದ ಮಾಜಿ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ ಆಶಿಶ್‌ ಮಿಶ್ರಾ ಅವರಿಗೆ ಡಿಸೆಂಬರ್‌ 2ರಿಂದ 31ರವರೆಗೆ ಹುಟ್ಟೂರಿಗೆ ಹೋಗಲು ಸುಪ್ರೀಂ ಕೋರ್ಟ್‌ ಗುರುವಾರ ಅನುಮತಿ ನೀಡಿದೆ.

‘ನನ್ನ ಮಗಳಿಗೆ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಇದೆ. ಪರೀಕ್ಷೆಗೂ ಮುನ್ನ ಮಗಳ ಜೊತೆ ಇರಲು ಅನುಮತಿ ನೀಡಬೇಕು’ ಎಂದು ಆಶಿಶ್‌ ಮಿಶ್ರಾ ಅವರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ಮಿಶ್ರಾ ಪರ ಹಿರಿಯ ವಕೀಲ ಸಿದ್ಧಾರ್ಥ್‌ ದವೆ ಅವರ ವಾದವನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್‌ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರ ಪೀಠವು, ‘ಯಾವುದೇ ರಾಜಕೀಯ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು. ಜಾಮೀನು ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಸೂಚಿಸಿತು.

ADVERTISEMENT

ಮಿಶ್ರಾ ಅವರು ಕುಟುಂಬಸ್ಥರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಲು ಅ.20ರಂದು ಹುಟ್ಟೂರು ಲಖಿಂಪುರ ಖೇರಿಗೆ ಭೇಟಿ ನೀಡಲು ಸುಪ್ರೀಂ ಕೋರ್ಟ್‌ ಅ.9ರಂದು ಅನುಮತಿ ನೀಡಿತ್ತು.

2021ರಲ್ಲಿ ಪ್ರತಿಭಟನಕಾರರ ಮೇಲೆ ವಾಹನ ಹತ್ತಿಸಿ ಎಂಟು ಜನರನ್ನು ಕೊಂದ ಪ್ರಕರಣದಲ್ಲಿ ಆಶಿಶ್‌ ಮಿಶ್ರಾ ಪ್ರಮುಖ ಆರೋಪಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.