ಲಖನೌ: ಲಖಿಂಪುರದಲ್ಲಿ ಕಾರು ಹರಿದು ರೈತರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ರೋಶ ಭುಗಿಲೆದ್ದಿದೆ. ಪ್ರತಿಭಟನೆ ನಡೆಸುತ್ತಿದ್ದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಂದು ಬೆಳಗ್ಗೆ ಬೆಂಬಲಿಗರ ಜೊತೆ ಲಖಿಂಪುರದ ಹಿಂಸಾಚಾರದ ಸ್ಥಳಕ್ಕೆ ತೆರಳಲು ಅಖಿಲೇಶ್ ಯಾದವ್ ಮುಂದಾಗಿದ್ದರು. ಆದರೆ, ಅವರ ಮನೆಯ ಎದುರೇ ಪೊಲೀಸರು ಅವರಿಗೆ ತಡೆಯೊಡ್ಡಿದ್ದರು. ಇದರಿಂದಾಗಿ, ಮನೆ ಮುಂದೆಯೇ ಕುಳಿತು ಅಖಿಲೇಶ್ ಪ್ರತಿಭಟನೆಗೆ ಮುಂದಾದರು. ಹಾಗಾಗಿ, ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
‘ಹಿಂಸಾಚಾರದ ಸ್ಥಳಕ್ಕೆ ಯಾವೊಬ್ಬ ರಾಜಕಾರಣಿಯನ್ನೂ ತೆರಳಲು ಸರ್ಕಾರ ಬಿಡುತ್ತಿಲ್ಲ. ಹಾಗಾದರೆ, ಸರ್ಕಾರ ಏನನ್ನು ಮುಚ್ಚಿಡುತ್ತಿದೆ’ಎಂದು ಅಖಿಲೇಶ್ ಯಾದವ್ ಪ್ರಶ್ನಿಸಿದ್ದಾರೆ.
ಈ ಸರ್ಕಾರವು ರೈತರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಬ್ರಿಟಿಷರು ಕೂಡ ಮಾಡಿರಲಿಲ್ಲ. ಗೃಹ ಸಚಿವ ಅಜಯ್ ಮಿಶ್ರಾ ಮತ್ತು ಉಪ ಮುಖ್ಯಮಂತ್ರಿ (ಕೇಶವ ಪ್ರಸಾದ್ ಮೌರ್ಯ) ಕೂಡಲೇ ರಾಜೀನಾಮೆ ನೀಡಬೇಕು. ಸಾವಿಗೀಡಾದ ರೈತರ ಕುಟುಂಬಗಳಿಗೆ ₹ 2 ಕೋಟಿ ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡಬೇಕು ಎಂದು ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಒತ್ತಾಯಿಸಿದ್ದಾರೆ.
ಲಖಿಂಪುರಕ್ಕೆ ತೆರಳಲು ಯತ್ನಿಸಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೂ ಪೊಲೀಸರು ತಡೆಯೊಡ್ಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.