ADVERTISEMENT

ಲಕ್ಷದ್ವೀಪ ಆಡಳಿತದ ಹೊಸ ಆದೇಶ: ಮೀನುಗಾರಿಕೆ ದೋಣಿಗಳಲ್ಲಿ ಸರ್ಕಾರಿ ಅಧಿಕಾರಿಗಳು!

ಪಿಟಿಐ
Published 6 ಜೂನ್ 2021, 15:06 IST
Last Updated 6 ಜೂನ್ 2021, 15:06 IST
.
.   

ಕೊಚ್ಚಿ: ಸ್ಥಳೀಯ ಮೀನುಗಾರಿಕೆ ದೋಣಿಗಳಲ್ಲಿ ಸರ್ಕಾರಿ ಅಧಿಕಾರಿಗಳನ್ನು ನಿಯೋಜಿಸುವುದು ಸೇರಿದಂತೆ ಹಲವು ಹೊಸ ನಿರ್ಧಾರಗಳನ್ನು ಲಕ್ಷದ್ವೀಪ ಆಡಳಿತ ಕೈಗೊಂಡಿದೆ.

ಬೇಹುಗಾರಿಕೆ ಮಾಹಿತಿಯನ್ನು ಸಂಗ್ರಹಿಸಲು ದೋಣಿಗಳಲ್ಲಿ ಅಧಿಕಾರಿಗಳನ್ನು ನಿಯೋಜಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಮೇ 28ರಂದು ಲಕ್ಷದ್ವೀಪ ಆಡಳಿತದ ಪ್ರಧಾನ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕೈಗೊಳ್ಳಲಾಗಿತ್ತು.

ಸ್ಥಳೀಯ ಮೀನುಗಾರಿಕೆ ದೋಣಿಗಳು ಮತ್ತು ಹಡಗುಗಳ ಮೇಲೆ ನಿಗಾವಹಿಸುವ ನಿಟ್ಟಿನಲ್ಲಿ ಭದ್ರತಾ ಕ್ರಮಗಳನ್ನು ಬಲಪಡಿಸುವ ಬಗ್ಗೆಯೂ ಸಭೆಯಲ್ಲಿ ನಿರ್ಧರಿಸಲಾಗಿತ್ತು.

ADVERTISEMENT

ದ್ವೀಪ ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುವ ಬಗ್ಗೆ ಹಲವು ಸೂಚನೆಗಳನ್ನು ನೀಡಲಾಗಿದೆ. ಬಳಸಿದ ಎಳನೀರು ಚಿಪ್ಪುಗಳು, ಗಿಡಗಳ ಎಲೆಗಳು, ತೆಂಗಿನಕಾಯಿ ನಾರು ಮುಂತಾದವುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು ಎಂದು ಜೂನ್‌ 4ರಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ಹೊಸ ಆದೇಶಗಳ ಬಗ್ಗೆ ಆಕ್ರೋಶ ವ್ಯಕ್ತಪಡಿರುವ ಲಕ್ಷದ್ವೀಪ ಸಂಸದ ಮೊಹಮ್ಮದ್‌ ಫೈಜಲ್‌, ತಕ್ಷಣವೇ ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

‘ದ್ವೀಪದಲ್ಲಿ ನೂರಾರು ದೋಣಿಗಳಿವೆ. ಈ ಎಲ್ಲ ದೋಣಿಗಳಿಗೆ ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆಯೇ? ಈಗಾಗಲೇ ಎಲ್ಲ ದ್ವೀಪಗಳಲ್ಲಿ ನೌಕಾಪಡೆ ಮತ್ತು ಕರಾವಳಿ ಪಡೆಯಿಂದ ನಿಗಾವಹಿಸುವ ವ್ಯವಸ್ಥೆ ಜಾರಿಯಲ್ಲಿದೆ. ಮೀನುಗಾರರಿಗೂ ಕರಾವಳಿ ಪಡೆ ತರಬೇತಿ ನೀಡಿದೆ. ಈ ರೀತಿಯ ಕಾನೂನುಗಳಿಗೆ ಅರ್ಥ ಇಲ್ಲ’ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ ಸಹ ಹೊಸ ಕ್ರಮಗಳಿಗೆ ವಿರೋಧ ವ್ಯಕ್ತಪಡಿಸಿದೆ. ಸೋಮವಾರ ಕೊಚ್ಚಿಯಲ್ಲಿ ಧರಣಿ ನಡೆಸಲು ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.